ಬೆಳಗಾವಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಭಕ್ತ ಶ್ರೇಷ್ಠ ಕನಕದಾಸ ಜಯಂತಿಯನ್ನು ಮಹಾನಗರ ಪಾಲಿಕ ಉಪ ಆಯುಕ್ತರಾದ ಉದಯಕುಮಾರ ಅವರು ಉದ್ಘಾಟಿಸಿ ಅವರು ಮಾತನಾಡಿದರು.
ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಲೋಕಕ್ಕೆ ದಾಸಶ್ರೇಷ್ಠ ಕನಕದಾಸರ ಕೊಡುಗೆ ಅಪಾರವಾದುದು. ಕನಕದಾಸರ ಜಯಂತಿಯನ್ನು ಭಕ್ತಿಪೂರ್ವಕವಾಗಿ, ಅಭಿಮಾನಪೂರ್ವಕವಾಗಿ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಸಾಂಸ್ಕೃತಿಕ ಲೋಕಕ್ಕೆ ಅವರ ಕೊಡುಗೆಯು ದೊಡ್ಡ ಪ್ರಮಾಣದಲ್ಲಿ ಆಧ್ಯಾತ್ಮಿಕ ಬೆಳವಣಿಗೆಗೆ ಕಾರಣವಾಗಿದೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದ್ದ ಶ್ರೀ ಸಿದ್ದಯೋಗಿ ಅಮರೇಶ್ವರ ಅಪ್ಪಾಜಿ ಅವರು ಮಾತನಾಡಿ, ಭಕ್ತಿ ಎನ್ನುವುದು ಆಡಂಬರವಾಗದೇ ಪ್ರಪಂಚದಲ್ಲಿ ಪ್ರತಿಯೊಬ್ಬರೂ ಜೀವನದ ಕಾಳಜಿ ವಹಿಸುವ ದಾಸರಾಗಿರಿ ಎಂದು ಹೇಳಿದರು.
ಕನಕದಾಸರು ತಮ್ಮ ಕೀರ್ತನೆಗಳ ಮೂಲಕವೇ ಅರಿವು ಮೂಡಿಸಲು ಯತ್ನಿಸಿ 15- 16ನೇ ಶತಮಾನದಲ್ಲಿ ಸಮಾಜದಲ್ಲಿನ ಜಾತಿ ವ್ಯವಸ್ಥೆ ತೊಡೆದುಹಾಕಲು ಶ್ರಮಿಸಿದರು. ಕಾಗಿನೆಲೆಯ ಆದಿಕೇಶವರಾಯ ಅಂಕಿತದ ಮೂಲಕ ಕೀರ್ತನೆಗಳನ್ನ ರಚಿಸಿ ದಾಸಸಾಹಿತ್ಯಕ್ಕೆ ಅಪೂರ್ವ ಕೊಡುಗೆ ನೀಡಿದರು.
ಕರ್ನಾಟಕದಲ್ಲಿ 15-16ನೇ ಶತಮಾನದಲ್ಲಿ ಜನಪ್ರಿಯವಾಗಿದ್ದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಕನಕದಾಸರು ಒಬ್ಬರಾಗಿದ್ದಾರೆ. ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಪುರಂದರದಾಸರೊಂದಿಗೆ ಕಾಣಿಕೆ ನೀಡಿದ್ದಾರೆ. ಕನಕದಾಸರು ಮೂಲತಃ ದಂಡನಾಯಕರಾಗಿದ್ದರು. ಯುದ್ಧವೊಂದರಲ್ಲಿ ಸೋತ ಅವರಿಗೆ ವೈರಾಗ್ಯ ಉಂಟಾಗಿ ಹರಿಭಕ್ತರಾಗಿದ್ದರು ಎಂದು ಹೇಳಲಾಗುತ್ತದೆ.
ಕನಕದಾಸರು ಸಮಾನತೆಯ ಸಂದೇಶಗಳನ್ನು ಹರಡುವಲ್ಲಿ ಮತ್ತು ಸಾಮಾಜಿಕ ಸಮುದಾಯವನ್ನು ಉನ್ನತೀಕರಿಸುವಲ್ಲಿ ಸಕ್ರಿಯ ಪಾತ್ರವನ್ನು ವಹಿಸಿದರು. ಕನಕದಾಸರು ತಮ್ಮ ಸರಳ ಬರಹಗಳು ಮತ್ತು ರಚನೆಗಳ ಮೂಲಕ ಜನಪ್ರಿಯತೆಯನ್ನು ಗಳಿಸಿದರು, ಅವರ ಸಾಹಿತ್ಯಕ ಬರಹಗಳ ಮೂಲಕ ಸಾಮಾನ್ಯರ ದೈನಂದಿನ ಚಟುವಟಿಕೆಗಳನ್ನು ಬಳಸಿಕೊಂಡು ಅವರ ಹೊಸತನವನ್ನು ತೋರಿಸಿದರು. ಈ ಕಾರಣಕ್ಕೆ ಕನಕದಾಸರು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ.
ಕನಕದಾಸರ ಬೋಧನೆಗಳನ್ನು ಸಾಕಾರಗೊಳಿಸುವ ಮೂಲಕ ಮತ್ತು ಅವರ ಸಾಹಿತ್ಯಕ ಕೊಡುಗೆಗಳನ್ನು ಗೌರವಿಸುವ ಮೂಲಕ ಅವರ ಬೋಧನೆಗಳು ಸಾಮರಸ್ಯ ಮತ್ತು ಸಹಾನುಭೂತಿಯ ಅಸ್ತಿತ್ವದ ಕಡೆಗೆ ನಮಗೆ ಮಾರ್ಗದರ್ಶನ ನೀಡಲಿ ಎಂದು ಶ್ರೀ.
ಸಿದ್ದಯೋಗಿ ಅಮರೇಶ್ವರ ಅಪ್ಪಾಜಿ ಹೇಳಿದರು.
ಈ ಸಂದರ್ಭದಲ್ಲಿ ಮಹಾಪೌರರಾದಸವಿತಾ ಕಾಂಬಳೆ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಜಿ.ಪಂ.ಸಿ.ಇ.ಓ ರಾಹುಲ ಶಿಂಧೆ ಸೇರಿದಂತೆ ಸಮುದಾಯದ ಗಣ್ಯರು, ಮುಖಂಡರು ಸಾರ್ವಜನಿಕರು ಪಾಲ್ಗೊಂಡಿದ್ದರು.