
ಡಾ. ಮನಮೋಹನ್ ಸಿಂಗ್ ಅವರು ವಿಶ್ವಶ್ರೇಷ್ಠ ಆರ್ಥಿಕ ತಜ್ಞ, ದೇಶದ ಮಧ್ಯಮ ಮತ್ತು ಬಡ ಜನರ ಹಿತಕ್ಕಾಗಿ ದೇಶದ ಆರ್ಥಿಕತೆಯನ್ನು ರೂಪಿಸಿದ ತಜ್ಞರಾಗಿದ್ದರು: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಳಗಾವಿ ಡಾ. ಮನಮೋಹನಸಿಂಗ್ ಅವರು ವಿಶ್ವಶ್ರೇಷ್ಠ ಆರ್ಥಿಕ ತಜ್ಞರಾಗಿ, ದೇಶದ ಮಧ್ಯಮ ಮತ್ತು ಬಡ ಜನರ ಹಿತಕ್ಕಾಗಿ ದೇಶದ ಆರ್ಥಿಕತೆಯನ್ನು ರೂಪಿಸಿದ ತಜ್ಞರಾಗಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.
ಸಿಪಿಇಡಿ ಮೈದಾನದಲ್ಲಿ ಕೆಪಿಸಿಸಿ ವತಿಯಿಂದ ಆಯೋಜಿಸಲಾಗಿದ್ದ ಮಾಜಿ ಪ್ರಧಾನಿ ದಿ.ಮನಮೋಹನ್ ಸಿಂಗ್ ಅವರ ಸಂತಾಪ ಸಭೆಯಲ್ಲಿ ಮಾತನಾಡಿದರು.
ಮನಮೋಹನ್ ಸಿಂಗ್ ಅವರ ಬದುಕಿನ ಮಾರ್ಪಾಡು ನೋಡಿದಾಗ ಆಶ್ಚರ್ಯ ಆಗತ್ತೆ. ಅತ್ಯಂತ ಕಡುಬಡತನದ ಕುಟುಂಬದಲ್ಲಿ ಜನಿಸಿ, ದೇಶ ಕಂಡ ವಿಶ್ವಶ್ರೇಷ್ಠ ಆರ್ಥಿಕ ತಜ್ಞರಾಗಿ ಎರಡು ಬಾರಿ ದೇಶದ ಪ್ರಧಾನಿಯಾದರು.
ತಾವು ಅಲಂಕರಿಸಿದ ಎಲ್ಲಾ ಹುದ್ದೆಗಳಿಗೂ ನ್ಯಾಯ ಒದಗಿಸಿದವರು.( RBI) ಆರ್ ಬಿ ಐ ಗವರ್ನರ್ ಆಗಿ, ಆರ್ಥಿಕ ಸಚಿವರಾಗಿ, ಹತ್ತು ವರ್ಷಗಳ ಕಾಲ ದೇಶದ ಪ್ರಧಾನಿಯಾಗಿ ಎಲ್ಲಾ ಹುದ್ದೆಗಳಿಗೂ ಪ್ರಾಮಾಣಿಕ ನ್ಯಾಯ ಒದಗಿಸಿದರು.
ಸೋನಿಯಾಗಾಂಧಿ ಅವರು ಪ್ರಧಾನಿ ಹುದ್ದೆಯನ್ನು ತ್ಯಾಗ ಮಾಡಿ ಆ ಹುದ್ದೆಗೆ ಮನಮೋಹನ್ ಸಿಂಗ್ ಅವರನ್ನು ಆರಿಸಿದರು. ಹತ್ತು ವರ್ಷಗಳ ಕಾಲ ದೇಶವನ್ನು ಅತ್ಯಂತ ಸದೃಢವಾಗಿ ಮುನ್ನಡೆಸಿದರು.
ಭಾರತ ಆರ್ಥಿಕ ಸಂಕಷ್ಟದಲ್ಲಿದ್ದಾಗ ಉದಾರೀಕರಣ ಜಾರಿ ಮಾಡಿ ದೇಶವನ್ನು ಆರ್ಥಿಕವಾಗಿ ಮೇಲೆತ್ತಿದರು.
ಮನಮೋಹನ್ ಸಿಂಗ್ ಅವರಿಗಿಂತ ಮೊದಲು ದೇಶದ ಆರ್ಥಿಕತೆಯನ್ನು ವಿಶ್ವ ಆರ್ಥಿಕತೆ ಜೊತೆಗೆ ಮುಕ್ತ ಮಾಡಿರಲಿಲ್ಲ. ಇವರು ಮುಕ್ತಗೊಳಿಸುವ ಮೂಲಕ ದೇಶದ ಆರ್ಥಿಕತೆಗೆ ಹೊಸ ಚೈತನ್ಯ ತುಂಬಿದರು.
ನಮ್ಮ ಸಂವಿಧಾನದ ಮೂಲಭೂತ ಆಶಯಗಳನ್ನು ಅಕ್ಷರಶಃ ಜಾರಿ ಮಾಡಿದರು.
ಆಹಾರ ಭದ್ರತೆ, ಶಿಕ್ಷಣ ಹಕ್ಕು ಕಾಯ್ದೆ, ಮಾಹಿತಿ ಹಕ್ಕು ಕಾಯ್ದೆ ಸೇರಿದಂತೆ ಹಲವು ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸಿ ದೇಶದ ಬಡವರು, ಮಧ್ಯಮವರ್ಗದವರನ್ನು ಆರ್ಥಿಕವಾಗಿ ಮೇಲೆತ್ತುವುದರಲ್ಲಿ ಯಶಸ್ವಿಯಾದರು.
ಮನಮೋಹನ್ ಸಿಂಗ್ ಅವರ ಅಗಲಿಕೆ ಇಡೀ ವಿಶ್ವದ ಆರ್ಥಿಕತೆಗೆ ಆಗಿರುವ ನಷ್ಟ.
ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ನಾವು ಆರಂಭಿಸಿದಾಗ ನಾವು ಮನಮೋಹನ್ ಸಿಂಗ್ ಅವರನ್ನು ಕರೆಸಿದ್ದೆವು. ಕರ್ನಾಟಕದ ಆರ್ಥಿಕತೆ ಬಗ್ಗೆ ಒಂದು ಕಾರ್ಯಕ್ರಮಕ್ಕೆ ನಾವು ಕರೆಸಿದ್ದೆವು. ಆಗ, ನಮ್ಮ ಅವಧಿಯಲ್ಲಿ ರಾಜ್ಯದ ಆರ್ಥಿಕತೆ ಅತ್ಯಂತ ಸದೃಢವಾಗಿದೆ ಎಂದು ಮೆಚ್ಚುಗೆ ಸೂಚಿಸಿದ್ದರು. ಅವರ ಜ್ಞಾನ ಭಾರತದ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಯಿತು.
ದೇಶದ ಆರ್ಥಿಕ ಸಮಸ್ಯೆಗಳನ್ನು ನಿಖರವಾಗಿ ಗ್ರಹಿಸಿ, ಪರಿಹರಿಸುತ್ತಿದ್ದ ಅವರು ನಿಗರ್ವಿ ಆಗಿದ್ದರು. ಅತ್ಯಂತ ವಿನಯಶೀಲರಾಗಿದ್ದರು.
ನಾನು ಬದುಕಿರುವಾಗ ನನ್ನ ಕೆಲಸಗಳಿಗೆ ಹೆಚ್ಚು ಮಾನ್ಯ ಸಿಗದಿದ್ದರೂ ಮುಂದೆ ನಮ್ಮ ಕೆಲಸಗಳಿಗೆ ಹೆಚ್ಚು ಮಹತ್ವ ಸಿಗಲಿದೆ ಎಂದು ಮನಮೋಹನ್ ಸಿಂಗ್ ಅವರು ಅವತ್ತೇ ಹೇಳಿದ್ದರು ಎಂದು ಸ್ಮರಿಸಿದರು.