ಬೆಂಗಳೂರು ನೆಲಮಂಗಲ ಟೋಲ್ ಅವಧಿ‌ ಮುಗಿದರೂ ಶುಲ್ಕ ವಸೂಲಿ ಆರೋಪ! ಪ್ರಶ್ನೆ ಮಾಡಿ ಹಣ ಪಾವತಿಸದೇ ಸಂಚರಿಸಿದ ಕಾರ್‌ ಚಾಲಕ

WhatsApp Group Join Now

ಬೆಂಗಳೂರು: ಬೆಂಗಳೂರು ತುಮಕೂರು ರಾಷ್ಟ್ರೀಯ ಹೆದ್ದಾರಿಯ ನೆಲಮಂಗಲ ಟೋಲ್ ಅವಧಿ‌ ಮುಗಿದರೂ ಶುಲ್ಕ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇನ್ನು ಈ ಬಗ್ಗೆ ಪ್ರಶ್ನೆ ಮಾಡಿದ ಕಾರ್‌ ಚಾಲಕರೊಬ್ಬರು ಒಂದು ರೂಪಾಯಿ ಶುಲ್ಕ ಪಾವತಿಸದೇ ಸಂಚಾರ ಮಾಡಿದ್ದಾರೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ನೆಲಮಂಗಲ ಟೋಲ್‌ ಮಾರ್ಗದಲ್ಲಿ ತೆರಳಿದ ವಾಹನ ಚಾಲಕ ” ಪಾಸ್ಟ್‌ಟ್ಯಾಗ್‌ ಯಾಕೆ ಸ್ಕ್ಯಾನ್‌ ಮಾಡಬೇಕು. ಈ ಟೋಲ್‌ನ ಟೆಂಡರ್‌ ಅವಧಿಯು 2020 ರಲ್ಲಿಯೇ ಮುಕ್ತಾಯವಾಗಿದೆ, ನಾನು ಯಾಕೆ ಹಣ ಪಾವತಿಸಬೇಕು ” ಎಂದು ಪ್ರಶ್ನೆ ಮಾಡಿದ್ದಾರೆ

ಇದಕ್ಕೆ ಅಲ್ಲಿಯೇ ಇದ್ದ ಟೋಲ್‌ ಕಂಪನಿಗೆ ಸೇರಿದ ಯುವಕರು ಜಗಳಕ್ಕೆ ಇಳಿದಿದ್ದಾರೆ. ಈ ಸಂದರ್ಭದಲ್ಲಿ ಸಾಕಷ್ಟು ವಾದ ವಿವಾದಗಳು ನಡೆದಿವೆ. ಕಳೆದ ನಾಲ್ಕು ವರ್ಷದಿಂದ ಅನಗತ್ಯ ಶುಲ್ಕ ವಸೂಲಿ ಮಾಡುತ್ತಿದ್ದೀರಾ. ರಸ್ತೆಯ ಅಭಿವೃದ್ಧಿಯಾಗಿಲ್ಲ. ಆರು ಲೈನ್‌ ರಸ್ತೆ ಮಾಡಬೇಕು. ಆದರೆ, ಇಂದಿಗೂ ನಾಲ್ಕ ಲೈನ್‌ ರಸ್ತೆ ಇದೆ. ಜತೆಗೆ ಸರ್ವೀಸ್‌ ರಸ್ತೆಯನ್ನು ಸ್ಥಳೀಯರಿಗೆ ನೀಡಿಲ್ಲ ಯಾಕೆ? ” ಎಂದೆಲ್ಲಾ ಪ್ರಶ್ನೆಗಳನ್ನು ಮಾಡಿದ್ದಾರೆ.

ನೆಲಮಂಗಲದ ಟೋಲ್ ಟೆಂಡರ್ ಮುಗಿದಿದ್ದರೂ ವಸೂಲಿಗೆ ನಿಂತ ಪುಡಿ ರೌಡಿಗಳು

ನಾವು ಬಂಡವಾಳ ಹಾಕಿದ್ದೇವೆ; ನಿತ್ಯ ಹಣ ಕಟ್ಟುತ್ತೇವೆ

ಟೋಲ್‌ ಕಟ್ಟಲು ನಿರಾಕರಿಸಿದ ಚಾಲಕರನ್ನು ಅಲ್ಲಿದ್ದ ಸಿಬ್ಬಂದಿಯು ನಾವು ಬಂಡವಾಳ ಹಾಕಿದ್ದೇವೆ. ಹೆದ್ದಾರಿ ಪ್ರಾಧಿಕಾರಕ್ಕೆ ಹಣ ಸಂದಾಯ ಮಾಡುತ್ತೇವೆ ಎಂದೆಲ್ಲಾ ಹೇಳಿ ಟೋಲ್‌ ಕಟ್ಟದಿದ್ದರೆ ವಾಹನ ಬಿಡುವುದಿಲ್ಲ ಎಂದು ಅಡ್ಡ ಹಾಕಿದ್ದಾರೆ. ಬಳಿಕವೂ ವಾದವನ್ನುಕಾರ್‌ ಚಾಲಕ ಮುಂದುವರೆಸಿದ್ದಾರೆ.

20 ವರ್ಷ ಟೋಲ್‌ ಕಟ್ಟಿದ್ದೇನೆ ಈಗ ಕಟ್ಟಲ್ಲ

ಕೊನೆಯ ಟೋಲ್‌ ಮತ್ತೊಬ್ಬ ಸಿಬ್ಬಂದಿಯೊಬ್ಬರು ಆಗಮಿಸಿ ಸರಿ ಹೋಗಪ್ಪ ನೀನು ಉಚಿತವಾಗಿ ಎಂದು ಯಾವುದೇ ಹಣ/ ಶುಲ್ಕ ಪಡೆಯದೇ ಕಾರ್‌ ಬಿಟ್ಟಿದ್ದಾರೆ. ನಾನೇನು ಉಚಿತವಾಗಿ ಹೋಗುತ್ತಿಲ್ಲ, 20 ವರ್ಷ ಟೋಲ್‌ ಕಟ್ಟಿದ್ದೇನೆ. ಈಗ ಟೆಂಡರ್‌ ಮುಗಿದಿದೆ ಅನಗತ್ಯ ಹಣ ಕಟ್ಟಲ್ಲ ಎಂದು ಚಾಲಕ ಉತ್ತರಿಸಿ ಮುಂದಕ್ಕೆ ಸಾಗಿದ್ದಾರೆ.

ಸಂಬಂಧಪಟ್ಟವರು ಪರಿಶೀಲನೆ ಮಾಡಬೇಕು

ತುಮಕೂರು ಬೆಂಗಳೂರು ನಡುವೆ ಇರುವ ನೆಲಮಂಗಲ ಟೋಲ್ ರಸ್ತೆಯಲ್ಲಿ 2000 ದಿಂದ 2020 ರವರೆಗೆ ಇದ್ದಂತ ಕರಾರು ಮುಗಿದಿದೆ. ಆದರೂ ನಾಲ್ಕು ವರ್ಷ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿದ್ದಾರೆ. ಇದರ ಬಗ್ಗೆ ಕೇಳೋರು ಹೇಳೋರು ಯಾರು ಇಲ್ಲ. ರೌಡಿಗಳನ್ನು ಇಟ್ಕೊಂಡು ಹಣ ವಸೂಲಿ ಮಾಡ್ತಾ ಇದ್ದಾರೆ. ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಅಥವಾ ರಸ್ತೆ ಸಾರಿಗೆ ಅಧಿಕಾರಿಗಳು ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ವಿಡಿಯೋ ಮೂಲಕ ಕಾರು ಚಾಲಕ ವಿನಂತಿ ಮಾಡಿದ್ದಾರೆ.ಸ್ಥಳೀಯ ವಾಹನ ಸವಾರರಿಗೆ ಪಾಸ್‌ ನೀಡಿದ್ದೇವೆ ಎಂದು ಹೇಳುವ ಟೋಲ್‌ ಕಂಪನಿ, ಶೇ.35ರಷ್ಟು ಜನರಿಗೂ ಈ ಸೌಲಭ್ಯ ಸಿಗುವಂತೆ ಮಾಡಿಲ್ಲ, ರೈತರು ಬೆಳೆ ಸಾಗಿಸುವಾಗ ಟೋಲ್‌ ಕಟ್ಟಬೇಕು, ಖಾಲಿ ವಾಹನ ಬರುವಾಗ ಕಟ್ಟಬೇಕು, ಸ್ಥಳೀಯ ಗ್ರಾಮಗಳಿಗೆ ಹೋಗಬೇಕು ಎಂದರೆ ದುಬಾರಿ ಶುಲ್ಕ ಪಾವತಿ ಮಾಡಿಯೇ ಹೋಗಬೇಕು, ಟೋಲ್‌ನಿಂದ ಆರೇಳು ಕಿ.ಮೀ. ದೂರದ ಜನರು ಟೋಲ್‌ ಕಟ್ಟುವ ದುಸ್ಥಿತಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೃಷ್ಟಿಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

About The Author