ಧಾರವಾಡ ಜಿಲ್ಲೆಯ ಸಂಸದರಾದ ಪ್ರಹ್ಲಾದ್ ಜೋಶಿ ಅವರು ಸೋಮವಾರ ದಿಲ್ಲಿಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣನ್ ಅವರನ್ನು ಭೇಟಿಯಾಗಿ ಲೋಕಾಪೂರದಿಂದ ಧಾರವಾಡ ಮತ್ತು ಬಾಗಲಕೋಟೆ ಟು ಕುಡಚಿ ರೈಲ್ವೆ ಮಾರ್ಗಗಳ ಕುರಿತು ಸಮಗ್ರವಾಗಿ ಚರ್ಚಿಸಿ ಶ್ರೀ ರೇಣುಕಾ ಯಲ್ಲಮ್ಮ ದೇವಿಯ ಲಕ್ಷಾಂತರ ಭಕ್ತರ ಅನುಕೂಲಕ್ಕಾಗಿ ರಾಮದುರ್ಗ, ಸವದತ್ತಿ ಮಾರ್ಗವಾಗಿ ಲೋಕಾಪುರ- ಧಾರವಾಡ ನಡುವೆ ಹೊಸ ರೈಲ್ವೆ ಮಾರ್ಗ ನಿರ್ಮಾಣ ಮತ್ತು ಬಾಗಲಕೋಟೆ ಟು ಕುಡಚಿ ಕಾಮಗಾರಿಗೆ ವೇಗ ನೀಡಲು ಸಂಸದ ಪ್ರಹ್ಲಾದ್ ಜೋಶಿಯವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಮಾಡಿದರು.
ದಿಲ್ಲಿಯ ರೈಲ್ವೆ ಭವನದಲ್ಲಿ ಸಚಿವರನ್ನು ಭೇಟಿ ಮಾಡಿದ ಸಂಸದ ಪ್ರಹ್ಲಾದ್ ಜೋಶಿ ”ಈ ರೈಲ್ವೆ ಮಾರ್ಗ ನಿರ್ಮಾಣಕ್ಕೆ 2019ರಲ್ಲಿ ಪ್ರಾಥಮಿಕ ಹಂತದ ಸಮೀಕ್ಷೆಯನ್ನು ರೈಲ್ವೆ ಇಲಾಖೆ ಕೈಗೊಂಡಿತ್ತು. ಆದರೆ, ಅಂದು ಪ್ರಯಾಣಿಕರ ಸಂಚಾರ ಕಡಿಮೆ ಇದೆ ಎಂದು ಪ್ರಸ್ತಾಪಿಸಿ ಯೋಜನೆ ಫಲದಾಯಕವಲ್ಲ ಎಂದು ವರದಿ ನೀಡಲಾಗಿತ್ತು.
ಇಂದಿನ ಸ್ಥಿತಿ ಬದಲಾಗಿದ್ದು, ಅಧಿಕ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿದ್ದಾರೆ. 2022ರ ಏಪ್ರಿಲ್ನಿಂದ 2023ರ ಮಾರ್ಚ್ ವರೆಗೆ ಅಂದಾಜು 1.23 ಕೋಟಿ ಜನ ಯಲಮ್ಮನ ಗುಡ್ಡಕ್ಕೆ ಆಗಮಿಸಿದ್ದಾರೆ.
ಈ ಅವಧಿಯಲ್ಲಿ 90 ಲಕ್ಷ ಕಿಂತ ಹೆಚ್ಚು ಭಕ್ತರು ದೇವಿ ದರ್ಶನ ಪಡೆದಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆ ಮಾಹಿತಿ ನೀಡಿದೆ. ಕೇಂದ್ರ ಸರಕಾರದ ವಿವಿಧ ಯೋಜನೆಯಡಿ ನೂರಾರು ಕೋಟಿ ರೂ. ಅನುದಾನದಲ್ಲಿ ಯಲ್ಲಮ್ಮನ ಗುಡ್ಡದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಸೌಲಭ್ಯಗಳು ಹೆಚ್ಚಾದರೆ ಭಕ್ತರ ಭೇಟಿಯೂ ಹೆಚ್ಚಾಗುತ್ತದೆ, ಈ ಹಿನ್ನೆಲೆಯಲ್ಲಿ ರೈಲ್ವೆ ಮಾರ್ಗ ನಿರ್ಮಾಣಕ್ಕಾಗಿ ಹೊಸ ಮಾರ್ಗಕ್ಕೆ ಕಾರ್ಯ ಕೈಗೊಳ್ಳಬೇಕು ಹಾಗೂ ಅದರ ಜತೆಗೆ ಆಮೆ ಗತಿಯಲ್ಲಿ ಸಾಗುತ್ತಿರುವ ಬಾಗಲಕೋಟೆ ಕುಡಚಿ ರೈಲ್ವೆ ಮಾರ್ಗ ಕಾಮಗಾರಿಗೆ ವೇಗ ನೀಡಿ, ಆದಷ್ಟು ಬೇಗ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಾಗಲಕೋಟೆ ಸಂಸದರಾದ ಪಿ ಸಿ ಗದ್ದಿಗೌಡರ್, ವಿಜಯಪುರ ಸಂಸದರಾದ ರಮೇಶ ಜಿಗಜಿಣಗಿ ಹಾಗೂ ರೇಲ್ವೆ ಅಧಿಕಾರಿಗಳು ಉಪಸ್ಥಿತರಿದ್ದರು.



