ಸವದತ್ತಿ ರೈತರು ಜಮೀನಿನಲ್ಲಿ ಬೆಳೆ ದ ಬೆಳೆ ಕಾರ್ಖಾನೆ ಧೂಳಿನಿಂದ ಹಾಳಾಗುತ್ತಿದ್ದು, ರಕ್ಷಣೆಗೆ ಮುಂದಾಗುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ರೈತರು ಮಂಗಳವಾರ ಪ್ರತಿಭಟನೆ ನಡೆಸಿದರು.
ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಮೆ: ಜಿಮ್ಮಿ ಸೇಲ್ಸ್ ಅಂಡ್ ರಿಸರ್ಚ, ಸರ್ವೆ ನಂ: 332/1(ಭಾಗ-1) ಹೂಲಿಕಟ್ಟಿ ಕಾರ್ಖಾನೆ ಹೊರಸೂಸುವ ವಿಷಕಾರಿ ಧೂಳು ಮತ್ತು ಹಾರೋ ಕಲ್ಲಿನ ಪೌಡರ್ ನಿಂದ ಕೃಷಿ ಜಮೀನಿನಲ್ಲಿ ಧೂಳು ಮಿಶ್ರಿತ ಹರಡಿದ್ದು, ಕೆಲ ರೈತರು ಬಿತ್ತನೆ ಮಾಡುವುದನ್ನೇ ಕೈಬಿಟ್ಟಿದ್ದಾರೆ. ಇನ್ನೂ ಕೆಲವರು ಬಿತ್ತನೆ ಕೈಗೊಂಡಿದ್ದರೂ ಧೂಳಿನಿಂದ ಬೆಳೆ ದಿನದಿಂದ ದಿನಕ್ಕೆ ನಾಶವಾಗುತ್ತಿದೆ ಎಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದರು.

ಧೂಳು ಮಿಶ್ರಿತ ಮೇವು ಸೇವನೆಯಿಂದ ಜಾನುವಾರುಗಳು ಬಳಲಿ ಸಾಯುತ್ತಿವೆ. ಜನಸಾಮಾನ್ಯರು ಉಸಿರಾಟಕ್ಕೂ ತೊಂದರೆ ಎದುರಿಸುವಂತಾಗಿದೆ.ಚಿಕ್ಕಮಕ್ಕಳು ಸೇರಿದಂತೆ ವೃದ್ಧರು ಸಮಸ್ಯೆ ಎದುರಿಸುತ್ತಿದ್ದಾರೆ. ಆರೋಗ್ಯಕ್ಕೆ ಅಪಾಯಕಾರಿಯಾದಂತ ಧೂಳು ಮಿಶ್ರಿತ ಪರಿಸರದಿಂದಾಗಿ ಜನರು ಪದೇ ಪದೆ ಅನಾರೋಗ್ಯಕ್ಕೆ ತುತ್ತಾಗುತ್ತಿರುವುದಲ್ಲದೇ ಆತಂಕ ಎದುರಿಸುತ್ತಿದ್ದಾರೆ.
ಕಲ್ಲು ಕೊರೆಯುವ ಕಾರ್ಖಾನೆಯಿಂದಾಗಿ ಅಲ್ಲಿರುವ ಮನೆಗಳಿಗೆ ಮತ್ತು ಹೊಲಗಳಿಗೆ ಬರುತ್ತಿರುವ ಧೂಳಿನಿಂದ ಬಹಳಷ್ಟು ತೊಂದರೆ ಉಂಟಾಗುತ್ತಿದೆ. ಸುಮಾರು ಎರಡೂ ಕಿಲೋ ಮೀಟರಗಳವರೆಗೆ ಧೂಳು ಬರುತ್ತಿರುವುದಿರಿಂದ ಹಾನಿ ಉಂಟಾಗುತ್ತಿದೆ. ಅಲ್ಲಿ ಸಾವಿರಾರು ಎಕರೆ ಭೂಮಿ ಇದ್ದು ಮತ್ತು ಅಲ್ಲಿ ವಾಸವಿರುವ ಎಲ್ಲ ಜನರಿಗೆ ರೋಗಗಳು ಬರುತ್ತಿವೆ. ಹಾಗೆಯೇ ಅಲ್ಲಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಇದ್ದು ಅಲ್ಲಿ ಓದುತ್ತಿರುವ ವಿಧ್ಯಾರ್ಥಿಗಳಿಗೂ ಕೂಡಾ ತುಂಬಾ ತೊಂದರೆಯಾಗುತ್ತದೆ.
ಕಲ್ಲು ಗಣಿಗಾರಿಕೆಯ ಧೂಳಿನಿಂದ ಉಂಟಾಗುವ ಮುಖ್ಯ ಸಮಸ್ಯೆಗಳು:
ಆರೋಗ್ಯ ಸಮಸ್ಯೆಗಳು: ದೀರ್ಘಕಾಲದವರೆಗೆ ಧೂಳನ್ನು ಸೇವಿಸುವುದರಿಂದ ಶ್ವಾಸಕೋಶದ ಸಮಸ್ಯೆಗಳು (ಸಿಲಿಕೋಸಿಸ್), ಕೆಮ್ಮು, ಅಸ್ತಮಾ, ಮತ್ತು ಕಣ್ಣಿನ ಉರಿ ಉಂಟಾಗುತ್ತದೆ.
ಗ್ರಾಮಸ್ಥರಲ್ಲಿ ಉಸಿರಾಟದ ತೊಂದರೆ ಮತ್ತು ಚರ್ಮರೋಗಗಳು ಹೆಚ್ಚುತ್ತಿವೆ.
ಪರಿಸರ ನಾಶ: ಗಣಿಗಾರಿಕೆ ಧೂಳು ಬೆಳೆಗಳ ಮೇಲೆ ಪಸರಿಸಿ ಕೃಷಿ ಉತ್ಪಾದನೆಯನ್ನು ಕುಂಠಿತಗೊಳಿಸುತ್ತದೆ ಮತ್ತು ಮರಗಿಡಗಳ ಬೆಳವಣಿಗೆಯನ್ನು ತಡೆಯುತ್ತದೆ.
ಮನೆಗಳಿಗೆ ಹಾನಿ: ಬಂಡೆಗಳನ್ನು ಸ್ಫೋಟಿಸುವಾಗ ಉಂಟಾಗುವ ಕಂಪನದಿಂದ ಸುತ್ತಮುತ್ತಲಿನ ಮನೆಗಳಲ್ಲಿ ಬಿರುಕುಗಳು ಮೂಡುತ್ತವೆ.
ಜಲ ಮೂಲಗಳ ಮಾಲಿನ್ಯ: ಕ್ರಷರ್ ಧೂಳು ಕೆರೆ-ಕಟ್ಟೆಗಳಿಗೆ ಸೇರಿ ನೀರು ಕಲುಷಿತಗೊಳ್ಳುತ್ತದೆ.
ಶಬ್ದ ಮಾಲಿನ್ಯ: ಬಂಡೆಗಳನ್ನು ಪುಡಿಮಾಡುವ ಯಂತ್ರಗಳ ಮತ್ತು ಸ್ಫೋಟದ ಸದ್ದು ಜನಜೀವನಕ್ಕೆ ತೊಂದರೆ ಉಂಟುಮಾಡುತ್ತದೆ.
ಧೂಳಿನ ಮಾಲಿನ್ಯ: ಗಣಿಗಾರಿಕೆಯಿಂದ ಏಳುವ ಧೂಳು ಬೆಳೆಗಳ ಮೇಲೆ ಕುಳಿತು ಇಳುವರಿ ಕುಂಠಿತವಾಗುತ್ತಿದೆ.
ಅಧಿಕಾರಿಗಳ ನಿರ್ಲಕ್ಷ್ಯ: ಸಾಕಷ್ಟು ಬಾರಿ ಸಂಬಂಧಪಟ್ಟಂತಹ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದರು ಕೂಡ ಇದುವರೆಗೆ ನಮ್ಮ ಸಮಸ್ಯೆಯನ್ನು ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಗಣಿಗಾರಿಕೆಯನ್ನು ತಕ್ಷಣವೇ ನಿಲ್ಲಿಸಬೇಕು ಎಂದು ರೈತರು ಪ್ರತಿಭಟನೆ ಮಾಡಿದರು.



