ಸರ್ವೋಚ್ಚ ನ್ಯಾಯಾಲಯ, ಕರ್ನಾಟಕ ಉಚ್ಚ ನ್ಯಾಯಾಲಯ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದಂತೆ ದಾವಣಗೆರೆ ಜಿಲ್ಲೆಯ ಜಿಲ್ಲಾ ಹಾಗೂ ತಾಲೂಕು ನ್ಯಾಯಾಲಯಗಳಲ್ಲಿ ಶನಿವಾರ ದಿನಾಂಕ : 14-03-2026 ರಂದು ರಾಷ್ಟ್ರೀಯ ಲೋಕ್ ಅದಾಲತ್ ನಡೆದಿದ್ದು, ಅದಾಲತ್ ನಲ್ಲಿ ಜಿಲ್ಲೆಯಲ್ಲಿ ವಿಚಾರಣೆಯಲ್ಲಿದ್ದ ಕೌಟುಂಬಿಕ, ಆಸ್ತಿ ವ್ಯಾಜ್ಯ, ಹಣಕಾಸು, ಅಪಘಾತ ಪರಿಹಾರ ಸೇರಿದಂತೆ
ಒಟ್ಟು 6,818 ಪ್ರಕರಣಗಳು ರಾಜೀ ಮೂಲಕ ಇತ್ಯರ್ಥಗೊಂಡಿವೆ” ಎಂದು ದಾವಣಗೆರೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಡಿಕೆ ವೇಲಾ ಮಾಹಿತಿ ನೀಡಿದರು.
ಪ್ರಥಮ ಲೋಕ ಅದಾಲತ್ ನಲ್ಲಿ 1,72,551 ವ್ಯಾಜ್ಯಪೂರ್ವ ಪ್ರಕರಣಗಳು ಮುಕ್ತಾಯಗೊಂಡಿವೆ. ₹15,60,41,523 ಮೊತ್ತದ ಸರ್ಕಾರಿ ವಸೂಲಾತಿ, ಪರಿಹಾರ ಹಾಗೂ ಇತರೆ ಹಣಕಾಸು ವ್ಯವಹಾರಗಳು ರಾಜೀ ಮೂಲಕ ಇತ್ಯರ್ಥಗೊಂಡಿವೆ. ಇದಲ್ಲದೆ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಒಟ್ಟು 37 ವೈವಾಹಿಕ ಪ್ರಕರಣಗಳು ರಾಜೀ ಆಗಿವೆ. ದಾವಣಗೆರೆ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಮತ್ತು ಜೀವನಾಂಶಕ್ಕಾಗಿ ಪ್ರಕರಣ ದಾಖಲಿಸಿದ್ದ 28 ಜೋಡಿಗಳು ಮತ್ತೆ ಒಂದಾಗಿ ಸಹಬಾಳ್ವೆ ನಡೆಸಲು ನಿರ್ಧರಿಸಿದ್ದು, ದಾವಣಗೆರೆಯ 4ನೇ ಅಪರ ಸಿವಿಲ್ ನ್ಯಾಯಾಲಯದಲ್ಲಿ 2 ಜೋಡಿಗಳು, ಚನ್ನಗಿರಿ ನ್ಯಾಯಾಲಯದಲ್ಲಿ 5, ಹರಿಹರದಲ್ಲಿ 1 ಮತ್ತು ಹೊನ್ನಾಳಿಯಲ್ಲಿ 1 ಜೋಡಿ ಪುನಃ ಒಂದಾಗಿದ್ದಾರೆ. ಹೊಂದಾಣಿಕೆಯಾದ ಜೋಡಿಗಳಿಗೆ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು, ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ವಕೀಲರ ಸಂಘದ ಅಧ್ಯಕ್ಷರು ಶುಭಾಶಯ ಕೋರಿ ಸಿಹಿ ಹಂಚಿ ಅವರ ಮುಂದಿನ ಜೀವನ ಸುಖಕರವಾಗಲಿ ಎಂದು ಹಾರೈಸಿದ್ದಾರೆ.
ರಾಷ್ಟ್ರೀಯ ಲೋಕ್ ಅದಾಲತ್ನಲ್ಲಿ ಜಿಲ್ಲೆಯಲ್ಲಿ ವಿವಿಧ ರೀತಿಯ ಪ್ರಕರಣಗಳು ರಾಜೀ ಮೂಲಕ ಇತ್ಯರ್ಥಗೊಂಡಿವೆ. ಅವುಗಳಲ್ಲಿ 54 ಅಪರಾಧಿಕ ಪ್ರಕರಣಗಳು, 165 ಚೆಕ್ ಅಮಾನ್ಯ ಪ್ರಕರಣಗಳು, 50 ಬ್ಯಾಂಕ್ ವಸೂಲಾತಿ ಪ್ರಕರಣಗಳು, 27 ಇತರೆ ಹಣ ವಸೂಲಾತಿ ಪ್ರಕರಣಗಳು, 55 ಅಪಘಾತ ಪರಿಹಾರ ಪ್ರಕರಣಗಳು, 123 ವಿದ್ಯುತ್ ಕಳ್ಳತನ ಪ್ರಕರಣಗಳು, 38 ಪಾಲು ವಿಭಾಗ ದಾವೆಗಳು, 15 ಮೋಟಾರು ವಾಹನ ಪರಿಹಾರ ಜಾರಿ ಅರ್ಜಿಗಳು, 106 ಇತರೆ ಜಾರಿ ಅರ್ಜಿಗಳು, 72 ವಿವಿಧ ದಾವೆಗಳು ಹಾಗೂ 39 ಜೀವನಾಂಶ ಪ್ರಕರಣಗಳು ರಾಜೀ ಮೂಲಕ ಮುಕ್ತಾಯಗೊಂಡಿವೆ. ಇದಲ್ಲದೆ ಜಿಲ್ಲೆಯಲ್ಲಿ ಶಾಲಾ ವಿದ್ಯಾರ್ಥಿಗಳ ಜನನ ಪ್ರಮಾಣ ಪತ್ರಕ್ಕಾಗಿ ದಾಖಲಿಸಿದ್ದ 1,138 ಪ್ರಕರಣಗಳು ಅದಾಲತ್ತಿನಲ್ಲಿ ಇತ್ಯರ್ಥಗೊಂಡು ಒಟ್ಟಾರೆಯಾಗಿ 6,818 ಜಾರಿಯಲ್ಲಿದ್ದ ಪ್ರಕರಣಗಳು ಮುಕ್ತಾಯಗೊಂಡಿವೆ” ಎಂದು ತಿಳಿಸಿದರು.
ಜನನ ಪ್ರಮಾಣ ಪತ್ರಗಳ ಸಮಸ್ಯೆ ಬಗೆಹರಿದ ಕಾರಣ ಸುಮಾರು 1,138 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ಅವಕಾಶ ಕಲ್ಪಿಸಿದಂತಾಗಿದೆ. ಜೊತೆಗೆ ಬ್ಯಾಂಕ್ ಸಾಲ ವಸೂಲಾತಿ, ಕಾರ್ಮಿಕ, ನೀರಿನ ಬಾಕಿ, ಕಂದಾಯ ಹಾಗೂ ಟ್ರಾಫಿಕ್ ಸೇರಿದಂತೆ ಒಟ್ಟು 1,72,551 ವ್ಯಾಜ್ಯಪೂರ್ವ ಪ್ರಕರಣಗಳು ಇತ್ಯರ್ಥಗೊಂಡು ₹13,19,83,769 ವಸೂಲಾತಿಯಾಗಿದೆ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ಶ್ರೀಮತಿ ಡಿ.ಕೆ. ವೇಲಾ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿಗಳಾದ ಮಹಾವೀರ ಎಂ ಕರೆಣ್ಣವರ, ಎರಡನೇ ಜಿಲ್ಲಾ ನ್ಯಾಯಾಧೀಶರಾದ ಪ್ರವೀಣ್ ಕುಮಾರ್, ಪೋಕ್ಸೋ ನ್ಯಾಯಾಧೀಶರಾದ ಎಸ್ ಎನ್ ಹೆಗಡೆ, ಕೌಟುಂಬಿಕ ನ್ಯಾಯಾಧೀಶರಾದ ಶಿವಪ್ಪ ಸಲಗರೆ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಟಿ ಆರ್ ಗುರು ಬಸವರಾಜ್ ಸೇರಿದಂತೆ ಇತರ ಗೌರವಾನ್ವಿತ ನ್ಯಾಯಾಧೀಶರು, ವಕೀಲರು ಮುಂತಾದವರು ಉಪಸ್ಥಿತರಿದ್ದರು.



