ಬಳ್ಳಾರಿ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಮೇಲೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಪಂಚಾಯತ್ ರಾಜ್ ಇಲಾಖೆಯ ಎಂಜಿನಿಯರಿಂಗ್ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ (ಎಇಇ) ವೆಶ್ಗಾರ ತಿಪ್ಪೇಸ್ವಾಮಿ ಅವರ ಮನೆ ಮತ್ತು ಕಚೇರಿ ಸೇರಿ ಒಟ್ಟು 3 ಸ್ಥಳಗಳ ಮೇಲೆ ಲೋಕಾಯುಕ್ತ ಪೊಲೀಸರು ಮಂಗಳವಾರ ದಾಳಿ ನಡೆಸಿದರು.
ತಿಪ್ಪೇಸ್ವಾಮಿ ಅವರು ₹2.14 ಕೋಟಿಯಷ್ಟು ಅಕ್ರಮ ಆಸ್ತಿ ಹೊಂದಿದ್ದು, ಇದು ಅವರ ಕಾನೂನುಬದ್ಧ ಆದಾಯಕ್ಕಿಂತ ಶೇ 174.01ರಷ್ಟು ಅಧಿಕ ಎಂದು ತಿಳಿದುಬಂದಿದೆ.
ಅವರ ಬಳಿ ಒಟ್ಟು ₹48.15 ಲಕ್ಷ ಮೌಲ್ಯದ 12 ನಿವೇಶನ, ₹1.15 ಕೋಟಿ ಮೌಲ್ಯದ 2 ಮನೆ, ₹29.20 ಲಕ್ಷ ಮೌಲ್ಯದ 8.1 ಎಕರೆ ವಿಸ್ತೀರ್ಣದ ಕೃಷಿ ಜಮೀನು, ₹3.51 ಲಕ್ಷ ನಗದು, ₹41 ಲಕ್ಷ ಮೌಲ್ಯದ ಚಿನ್ನ, ₹75,885 ಮೌಲ್ಯದ ಬೆಳ್ಳಿ ಆಭರಣ, ₹8.35 ಲಕ್ಷ ಮೌಲ್ಯದ ವಾಹನ, ₹67.76 ಲಕ್ಷ ಮೌಲ್ಯದ ಇತರೆ ಸಾಮಗ್ರಿಗಳು ಇವೆ ಎಂದು ಮೂಲಗಳು ತಿಳಿಸಿವೆ.
ಬಳ್ಳಾರಿ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಈ ಕುರಿತು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.



