ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರವು ರೈತರ ಜಮೀನಿನಲ್ಲಿ ಉಪನಗರ ನಿರ್ಮಿಸಲು ಮುಂದಾಗಿದೆ. ಆದರೆ ಇದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಇದು ರೈತ ವಿರೋಧಿ ನಿರ್ಧಾರ, ಕೂಡಲೇ ಈ ಯೋಜನೆಯನ್ನು ಕೈಬಿಡಬೇಕು ಎಂಬ ಒತ್ತಡಗಳು, ಆಗ್ರಹಗಳು ಹೆಚ್ಚಾಗಿವೆ. ರೈತರ ಕೃಷಿ ಜಮೀನಿನಲ್ಲಿ ಉಪನಗರ ನಿರ್ಮಾಣಕ್ಕೆ ಕೈಹಾಕಿ ಉಪ ಚುನಾವಣೆ ಹೊತ್ತಲ್ಲಿ ಸರ್ಕಾರ ಕೈಸುಟ್ಟುಕೊಂಡಿತೆ ಎನ್ನಲಾಗುತ್ತಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ನಂದಗುಡಿ, ಸೂಲಿಬೆಲೆ ಹೋಬಳಿಗಳ 36 ಗ್ರಾಮಗಳ 18,000 ಎಕರೆ ಕೃಷಿ ಭೂಮಿಯಲ್ಲಿ ಉಪನಗರ ನಿರ್ಮಿಸಲು ನಿರ್ಧಾರ ಮಾಡಿರುವುದು ರೈತ ವಿರೋಧಿ ನಿರ್ಧಾರ. ಕೂಡಲೇ ಈ ಯೋಜನೆಯನ್ನು ಕೈಬಿಡಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದರು.
ಭೂಸ್ವಾಧೀನ ವಿರೋಧ ಹೋರಾಟ ಸಮಿತಿ ವತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ನಂದಗುಡಿ ಉಪನಗರ ಯೋಜನೆ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಸಂಬಂಧ ಸಾವಿರಾರು ರೈತರುಗಳ ಕೃಷಿ ಜಮೀನುಗಳನ್ನು ಭೂ ಸ್ವಾಧೀನ ಮಾಡಿಕೊಳ್ಳಲಾಗಿದೆ. ಸರ್ಕಾರ ಈ ಕ್ರಮ ವಿರೋಧಿಸಿ ಮಂಗಳವಾರ ನಂದಗುಡಿಯ ಗಾಂಧಿ ಸರ್ಕಲ್ನಲ್ಲಿ ರೈತರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರೈತರ ಹಿತ ಕಡೆಗಣಿಸಿ ‘ಜೆಸಿಬಿ’ ಸರ್ಕಾರಗಳು ರಾಜ್ಯದಲ್ಲಿ ಆಡಳಿತ ನಡೆಸಿರುವ ಜೆಸಿಬಿ ಸರ್ಕಾರಗಳು ರೈತರ ಹಿತವನ್ನು ಸಂಪೂರ್ಣವಾಗಿ ಕಡೆಗಣಿಸಿವೆ. ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಪಕ್ಷಗಳನ್ನು ಹೊರತುಪಡಿಸಿ ಉತ್ತಮ ಸರ್ಕಾರವನ್ನು ಆಯ್ಕೆ ಮಾಡುವಾಗ ಸರ್ಕಾರ ನೂರು ಭಾರಿ ಯೋಚಿಸಿ ಉತ್ತಮ ಪಕ್ಷ ಆರಿಸಬೇಕು ಎಂದರು. ರಾಜ್ಯದ ರೈತರನ್ನು ಈ ರಾಜಕಾರಣಿಗಳು ಕಷ್ಟಕ್ಕೆ ತಳ್ಳುತ್ತಿದ್ದಾರೆ. ಅವರ ಏಳಿಗೆ ಬಗ್ಗೆ ಇವರಿಗೆ ಕಾಳಜಿಯೇ ಇಲ್ಲದಾಗಿದೆ. ರಾಜ್ಯದಲ್ಲಿ ರೈತಪರ ಸರ್ಕಾರ ಬರಬೇಕು, ರೈತ ಸಂಘಟನೆಗಳ ಪಕ್ಷಗಳು ಅಧಿಕಾರಕ್ಕೆ ಬಂದರೆ ಮಾತ್ರ ಸಮಸ್ಯೆ ಬಗೆಹರಿಸಲು ಸಾಧ್ಯ ಎಂದು ಅವರು ಪ್ರತಿಪಾದಿಸಿದ್ದಾರೆ.
ರಿಯಲ್ ಎಸ್ಟೇಟ್ ದಂಧೆಗೆ ಅವಕಾಶ ಬೇಡ ಬಲವಂತವಾಗಿ ಕೃಷಿ ಭೂಮಿಯನ್ನು ವಶಪಡಿಸಿಕೊಂಡು ರಿಯಲ್ ಎಸ್ಟೇಟ್ ದಂಧೆಗೆ ಸರ್ಕಾರ ಅವಕಾಶ ಕೊಡಬಾರದು. ಕೃಷಿ ಭೂಮಿಯನ್ನು ಕಳೆದುಕೊಂಡರೆ ಅದನ್ನೇ ನೆಚ್ಚಿಕೊಂಡು ಬುದಕು ಸಾಗಿಸುತ್ತಿರುವ ಸಾವಿರಾರು ಕೃಷಿ ಕುಟುಂಬಗಳು, ಕಾರ್ಮಿಕರು ಬೀದಿಗೆ ಬೀಳುತ್ತಾರೆ. ಅವರ ಬದುಕು ದುಸ್ತರವಾಗಲಿದೆ. ನಿರುದ್ಯೋಗ ಸಮಸ್ಯೆ ಕಾಡಲಿದೆ ಎಂದು ಅವರು ಸರ್ಕಾರಕ್ಕೆ ಮನದಟ್ಟು ಮಾಡಿದರು. ಡಿಕೆಶಿಯವರೇ ರೈತರ ನೆಮ್ಮದಿ ಹಾಳು ಮಾಡಬೇಡಿ ದೇಶಕ್ಕೆ ಅನ್ನ ಕೊಡುವುದು ರೈತರಗೆ ಮೊದಲಿನಿಂದ ಸಿಗಬೇಕಾದ ಪ್ರಾಮುಖ್ಯತೆ ದೊರೆಯುತ್ತಿಲ್ಲ. ನೀವು ಬೆಳೆಯುವ ರೇಷ್ಮೆಯಿಂದ ಬಟ್ಟೆ ಧರಿಸುತ್ತಿದ್ದಾರೆ, ನಾವು ರೈತರಿಗೆ ಋಣವಾಗಿರಬೇಕು. ಆದರೆ ಕಾಂಗ್ರೆಸ್, ಬಿಜೆಪಿ ಸರ್ಕಾರಗಳು ರೈತರ ಹಿತವನ್ನು ಸಂಪೂರ್ಣವಾಗಿ ಕಡೆಗಣಿಸಿವೆ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ ನಿಮ್ಮ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ರೈತರ ನೆಮ್ಮದಿ ಹಾಳು ಮಾಡಬೇಡಿ ಎಂದು ಅವರು ಎಚ್ಚರಿಕೆ ಕೊಟ್ಟರು.
ಇನ್ನೂ ಮಾಜಿ ಸಿಎಂಗಳಾದ ಬಿಎಸ್ ಯಡಿಯೂರಪ್ಪ, ಎಚ್.ಡಿ. ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ, ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಎಂ ಹುದ್ದೆಗೇರುವ ಮುನ್ನ ಎಷ್ಟು ಆಸ್ತಿ ಹೊಂದಿದ್ದರು. ಈಗ ಎಷ್ಟು ಆಸ್ತಿ, ಜಮೀನು ಜಮೀನು ಹೊಂದಿದ್ದಾರೆ? ಎಲ್ಲವೂ ಇವರಿಗೆ ಬೇಕು ಎಂದರೆ ಬಡವರು ಎಲ್ಲಿಗೆ ಹೋಗಬೇಕು ಎಂದು ಅವರು ರಾಜಕಾರಣಿಗಳ ನಿರ್ಲಕ್ಷಕ್ಕೆ ಕಿಡಿ ಕಾರಿದರು. ಯೋಜನೆ ಮುಂದುವರೆಸಿದರೆ ಬೃಹತ್ ಹೋರಾಟ, ಎಚ್ಚರಿಕೆ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಪೃಥ್ವಿ ರೆಡ್ಡಿ ಮಾತನಾಡಿ, ಕಾಂಗ್ರೆಸ್ ಆಗಲಿ ಬಿಜೆಪಿಯಾಗಲಿ ರೈತರ ಹಿತ ಕಾಯಲು ಎಂದೂ ಪ್ರಯತ್ನ ಮಾಡಿಲ್ಲ. ಇವರ ರಿಯಲ್ ಎಸ್ಟೇಟ್ ಲಾಭಿಗೆ ರಾಜ್ಯದ ರೈತರನ್ನು ಬಲಿ ಕೊಡಲು ಹೊರಟಿದ್ದಾರೆ. ಇದಕ್ಕೆ ಆಮ್ ಆದ್ಮಿ ಪಾರ್ಟಿ ಅವಕಾಶ ಕೊಡುವುದಿಲ್ಲ, ರೈತರು ನಡೆಸುತ್ತಿರುವ ಈ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು. ರೈತರ ಬೇಡಿಕೆಯನ್ನು ಪರಿಗಣಿಸಿ ಕೂಡಲೇ ಸರ್ಕಾರ ಈ ಉಪನಗರ ಯೋಜನೆಯನ್ನು ಕೈಬಿಡಬೇಕು. ಒಂದು ವೇಳೆ ಸರ್ಕಾರ ಏನಾದರೂ ರೈತರ ಜಮೀನು ಕಸಿಯಲು ಮುಂದಾದರೆ ಆಮ್ ಆದ್ಮಿ ಪಾರ್ಟಿ ವತಿಯಿಂದ ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.