
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಭವಾನಿ ನಗರದಲ್ಲಿ ನಿರ್ಮಿಸಲಾದ ನೂತನ ಮರಾಠಾ ಅರ್ಬನ್ ಕೋ ಆಪರೇಟಿವ್ ಸೊಸೈಟಿಯ ನೂತನ ಕಟ್ಟಡದ ಉದ್ಘಾಟನೆ ಹಾಗೂ ಸೋಸೈಟಿಯ 24 ನೇ ವಾರ್ಷಿಕೋತ್ಸವ ಸಮಾರಂಭವನ್ನು ಮಾಜಿ ಸಿಎಂ ಹಾಗೂ ಸಂಸದ ಜಗದೀಶ್ ಶೆಟ್ಟರ ಉದ್ಘಾಟಿಸಿ ಅವರು ಮಾತನಾಡಿದರು.
ರಾಮದುರ್ಗ ನಗರದಲ್ಲಿ 24 ವರ್ಷಗಳ ಹಿಂದೆ ಮರಾಠಾ ಸೊಸೈಟಿಯನ್ನು ಆರಂಭಿಸಿ ಇಂದು ಎರಡು ಉಪ ಶಾಖೆಗಳೊಂದಿಗೆ ಸಾಕಷ್ಟು ಜನರ ಆರ್ಥಿಕ ವಲಯ ಸುಧಾರಣೆಗೆ ಮುಂದಾಗಿದೆ. ಅಲ್ಲದೇ ಸ್ವಂತ ಕಟ್ಟಡದಲ್ಲಿ ಇಂದು ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.
ತಮ್ಮೆಲ್ಲರ ಆಶೀರ್ವಾದದಿಂದ ಕಳೇದ ಲೋಕಸಭಾ ಚುನಾವಣೆಯಲ್ಲಿ ಅತೀ ಹೆಚ್ಚು ಮತಗಳಿಂದ ಗೆದ್ದಿದ್ದೇನೆ. ಬೆಳಗಾವಿ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸಿ ನಿಮ್ಮ ಋಣ ತೀರಿಸುವುದಾಗಿ ಹೇಳಿದರು.
ಸಾನಿಧ್ಯ ವಹಿಸಿದ್ದ ಬೆಂಗಳೂರು ಗವಿಪುರಂನ ಗೋಸಾಯಿ ಮರಾಠಾ ಮಠದ ಭವಾನಿ ಪೀಠದ ಶ್ರೀ ಮಂಜುನಾಥ ಭಾರತಿ ಸ್ವಾಮೀಜಿ ಅವರು ಆಶೀರ್ಚಚನ ನೀಡಿದರು. ಮರಾಠಾ ಅರ್ಬನ್ ಕೊ-ಅಪ್. ಕ್ರೆಡಿಟ್ ಸೊಸೈಟಿಯ ಅಧ್ಯಕ್ಷ ಪಿ.ಎಂ. ಜಗತಾಪ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ 50 ವರ್ಷ ದಾಂಪತ್ಯ ಜೀವನ ನಡೆಸಿದ ಕ್ಷತ್ರೀಯ ಸಮಾಜದ ದಂಪತಿಗಳಿಗೆ ಹಾಗೂ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಮಾಜಿ ಶಾಸಕ ಮಹಾದೇವಪ್ಪ ಯಾದವಾಡ, ಧನಲಕ್ಷ್ಮಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ, ಕೆಕೆಎಂಪಿ ಕೇಂದ್ರ ಕಾರ್ಯಕಾರಿ ಸಮಿತಿಯ ಗವರ್ನಿಂಗ್ ಕೌನ್ಸಿಲ್ ಚೇರಮನ್ ಎಸ್.ಆರ್. ಸಿಂದ್ಯಾ, ಅಶ್ವಥ್ನಾರಾಯಣ ಜಾಧವ್, ಸುರೇಶ ಲಾಡ್, ರವಿ ಸಾವಂತ, ಸಾಂಬಾಜಿರಾವ್, ವಿ.ವಿ. ತುಳಸಿಗೇರಿ, ಡಾ| ವೈ.ಬಿ. ಕುಲಗೋಡ, ಅಶೋಕ ಅಂಗಡಿ, ಪುಂಡಲೀಕ ಬಾಳೋಜಿ ಸೇರಿದಂತೆ ಕ್ಷತ್ರೀಯ ಸಮಾಜದ ಮುಖಂಡರು, ಸೊಸೈಟಿ ಕಾರ್ಯಕಾರಿ ಮಂಡಳಿ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು


