
ಬಳ್ಳಾರಿ ಪಟ್ಟಣದ ಡಾ.ರಾಜ್ ಕುಮಾರ್ ರಸ್ತೆಯ ರಾಬರ್ಟ್ ಬ್ರೂಸ್ ಫುಟ್ ಸಂಗನಕಲ್ಲು ಪ್ರಾಕ್ತನ ವಸ್ತು ಸಂಗ್ರಹಾಲಯಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಗುರುವಾರ ಭೇಟಿ ನೀಡಿ ವೀಕ್ಷಣೆ ಮಾಡಿದರು.
ರಾಬರ್ಟ್ ಬ್ರೂಸ್ ಫುಟ್ ಸಂಗನಕಲ್ಲು ಪ್ರಾಕ್ತನ ವಸ್ತು ಸಂಗ್ರಹಾಲಯದಲ್ಲಿ ಹಲವಾರು ಪುರಾತನ ಪಳೆಯುಳಿಕೆಗಳನ್ನು ಸಂಗ್ರಹಿಸಲಾಗಿದ್ದು, ಆಕರ್ಷಣೀಯ ವಸ್ತು ಸಂಗ್ರಹಾಲಯಗಳಲ್ಲಿ ಒಂದಾಗಿದೆ. ಹಲವಾರು ವಸ್ತುವಿಷಯಗಳನ್ನು ಒಳಗೊಂಡಿದ್ದು, ವಸ್ತುಸಂಗ್ರಹಾಲಯದ ನಿರ್ವಹಣೆಯು ಅಚ್ಚುಕಟ್ಟಾಗಿದೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಮಾತನಾಡಿ, ಪ್ರಾಚೀನ ಶಿಲಾಯುಗ ಮತ್ತು ನವಶಿಲಾಯುಗಗಳಿಗೆ ರಾಬರ್ಟ್ ಬ್ರೂಸ್ ಫೂಟ್ ಸಂಗನಕಲ್ಲು ಪುರಾತತ್ವ ವಸ್ತುಸಂಗ್ರಹಾಲಯವು ಶಿಲಾಯುಗದ ಉಪಕರಣಗಳ ವಿಶಿಷ್ಟವಾದ ಇತಿಹಾಸ ಪೂರ್ವ ಮಾಹಿತಿ ಒಳಗೊಂಡಿದೆ. ಶಿಲಾಯುಗದ ಮೇಲೆ ಕೇಂದ್ರೀಕೃತವಾಗಿರುವ ಏಕೈಕ ವಸ್ತು ಸಂಗ್ರಹಾಲಯವು ಇದಾಗಿದೆ ಎಂದು ತಿಳಿಸಿದರು.
ದೇಶದಲ್ಲಿಯೇ ಪ್ರಾಗೈತಿಹಾಸಕ್ಕಾಗಿ ಮೀಸಲಿಟ್ಟ ಏಕೈಕ ವಸ್ತು ಸಂಗ್ರಹಾಲಯವಾಗಿದೆ. ಪ್ರಪಂಚದ ವಿವಿಧ ದೇಶಗಳಲ್ಲಿ ವಿವಿಧ ಕಾಲಗಟ್ಟಗಳಲ್ಲಿ ದೊರೆತ ತಲೆಬುರುಡೆಗಳು ಮಾದರಿಗಳಿವೆ ಹಾಗೂ ಆಫ್ರಿಕಾದಲ್ಲಿ ಸಿಕ್ಕಂತಹ ಶಿಲಾ ಉಪಕರಣಗಳ ಮಾದರಿಗಳು ಇವೆ.
ಈ ವೇಳೆ ಬಳ್ಳಾರಿ ವಲಯ ಪೊಲೀಸ್ ಮಹಾನಿರೀಕ್ಷಕ ಬಿ.ಎಸ್.ಲೋಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ.ವಿ.ಜೆ., ತಹಶೀಲ್ದಾರ ಗುರುರಾಜ, ರಾಬರ್ಟ್ ಬ್ರೂಸ್ ಫುಟ್ ಸಂಗನಕಲ್ಲು ಪ್ರಾಕ್ತನ ವಸ್ತು ಸಂಗ್ರಹಾಲಯದ ಸದಸ್ಯ ಸಂತೋಷ್ ಮಾರ್ಟಿನ್, ಅಹಿರಾಜ್, ತಾಂತ್ರಿಕ ಸಹಾಯಕರಾದ ಗೌರಿ ಪಾಲ್ಗೊಂಡಿದ್ದರು


