ಜಿಲ್ಲಾಡಳಿತದಿಂದ ಕಾಯಕಯೋಗಿ ನುಲಿಯ ಚಂದಯ್ಯ ಜಯಂತ್ಯೋತ್ಸವ

WhatsApp Group Join Now

ಬಳ್ಳಾರಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಸೋಮವಾರ ಏರ್ಪಡಿಸಿದ್ದ ನುಲಿಯ ಚಂದಯ್ಯ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಡಾ.ಬಾಬು ಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ ಉದ್ಘಾಟಿಸಿ ಅವರು ಮಾತನಾಡಿದರು.
ಹನ್ನೆರಡನೇ ಶತಮಾನದ ವಚನಕಾರರಲ್ಲಿ ಒಬ್ಬರಾದ ನುಲಿಯ ಚಂದಯ್ಯನವರು ಮಹಾನ್ ಕಾಯಕಯೋಗಿ ಆಗಿದ್ದರು. ಅವರು ತಮ್ಮ ವಚನಗಳ ಮೂಲಕ ಧಾರ್ಮಿಕ ಮತ್ತು ಸಾಮಾಜಿಕ ಚಿಂತನೆಗಳನ್ನು ಸಾರಿ, ಜನ ಸಾಮಾನ್ಯರಲ್ಲಿ ಭಾವೈಕ್ಯತೆಯ ಅರಿವು ಮೂಡಿಸಿದರು. ಕಾಯಕಯೋಗಿ ನುಲಿಯ ಚಂದಯ್ಯನವರು ಸಾಂಸ್ಕೃತಿಕ ರಾಯಭಾರಿಯಾಗಿದ್ದರು. ಅವರ ಆಚಾರ-ವಿಚಾರ, ಕೊಡುಗೆಗಳನ್ನು ಸ್ಮರಿಸುವುದು ಅವಶ್ಯಕವಾಗಿದೆ. ಸಮಾಜದಲ್ಲಿನ ಜಾತಿ ವ್ಯವಸ್ಥೆ ಸೇರಿದಂತೆ ಅನ್ಯಾಯದ ವಿರುದ್ಧ ಧ್ವನಿಎತ್ತಿ, ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಸಮಾಜ ಹಾಗೂ ಜನ ಸಾಮಾನ್ಯರ ಏಳಿಗೆಗಾಗಿ ಪರಿತಪಿಸಿದ ವಿವಿಧ ಮಹನೀಯರ ವಿಚಾರಧಾರೆಗಳನ್ನು ಪಾಲಿಸಿ, ಉತ್ತಮ ಜೀವನ ನಡೆಸಬೇಕು. ಎಲ್ಲರೂ ಸಂಘಟಿತರಾಗಿ ದುಶ್ಚಟಗಳಿಂದ ದೂರವಿದ್ದು, ಸರ್ಕಾರ ಯೋಜನೆಗಳನ್ನು ಸದುಪಯೋಗಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಬಳ್ಳಾರಿಯ ನಿವೃತ್ತ ಶಿಕ್ಷಕ ಕೆ.ಹನುಮಂತಪ್ಪ ಅವರು ವಿಶೇಷ ಉಪನ್ಯಾಸ ನೀಡಿ, ನುಲಿಯ ಚಂದಯ್ಯನವರು ಸಮಾಜದ ಶ್ರೇಷ್ಠ ಕಾಯಕ ಯೋಗಿಯಾಗಿದ್ದರು, ತಮ್ಮ ವೃತ್ತಿಯ ಬಗ್ಗೆ ಅಪಾರ ಗೌರವ ಹೊಂದಿದ್ದವರು. ಮಹಾನ್ ಕಾಯಕಯೋಗಿ ನುಲಿಯ ಚಂದಯ್ಯ ಅವರು ವೃತ್ತಿಯಿಂದ ಬಂದಂತಹ ಆದಾಯದಲ್ಲಿ ತಮ್ಮ ಜೀವನಕ್ಕೆ ಅಲ್ಪ ವ್ಯಯಮಾಡಿಕೊಂಡು ಉಳಿದ ಹಣದಲ್ಲಿ ಜಂಗಮರ ದಾಸೋಹಕ್ಕಾಗಿ ಮೀಸಲಿಟ್ಟಿದ್ದು, ಅವರ ನಿಸ್ವಾರ್ಥ ಸೇವೆಗೆ ಸಾಕ್ಷಿಯಾಗಿದೆ ಎಂದರು.
ಇಂದಿನ ಪೀಳಿಗೆಯು ಮೌಢ್ಯತೆಯಿಂದ ಹೊರಬಂದು, ಶರಣರ ಆಧ್ಯಾತ್ಮ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು. ಇದೇ ವೇಳೆ ನುಲಿಯ ಚಂದಯ್ಯನವರ ಜೀವನ ಮತ್ತು ವಚನಗಳ ಕುರಿತು ಉಪನ್ಯಾಸ ನೀಡಿದರು.
ಇದಕ್ಕೂ ಮುನ್ನ ಸಮಾರಂಭದಲ್ಲಿ ಭಾಗವಹಿಸಿದ್ದ ಎಲ್ಲ ಗಣ್ಯರು ಕಾಯಕಯೋಗಿ ನುಲಿಯ ಚಂದಯ್ಯನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಬಳ್ಳಾರಿಯ ಜಡೇಶ್ ಎಮ್ಮಿಗನೂರು ಅವರ ವಚನ ಸಂಗೀತ ಕೇಳುಗರ ಕಿವಿ ಇಂಪಾಗಿಸಿತು.
ಮೆರವಣಿಗೆ:
ಜಯಂತಿಯ ಅಂಗವಾಗಿ ಆಯೋಜಿಸಿದ್ದ ಮೆರವಣಿಗೆಯು ವಿವಿಧ ಸಾಂಸ್ಕೃತಿಕ ಕಲಾತಂಡಗನ್ನೊಳಗೊಂಡು, ಬಂಡಿಮೋಟ್‌ನ ಬೆಂಕಿ ಮಾರೆಮ್ಮ ದೇವಸ್ಥಾನದಿಂದ ಆರಂಭವಾಗಿ ಹಳೇ ಬ್ರೂಸ್‌ಪೇಟೆ ಪೊಲೀಸ್ ಠಾಣೆ, ತೇರು ಬೀದಿ, ಹೆಚ್.ಆರ್.ಗವಿಯಪ್ಪ ವೃತ್ತದಿಂದ ಜೋಳದರಾಶಿ ದೊಡ್ಡನಗೌಡ ರಂಗಮAದಿರದ ವೇದಿಕೆ ಕಾರ್ಯಕ್ರಮಕ್ಕೆ ತಲುಪಿ ಸಂಪನ್ನಗೊಂಡಿತು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಜಿಲ್ಲಾ ಕುಳುವ ಮಹಾ ಸಂಘದ ಜಿಲ್ಲಾಧ್ಯಕ್ಷ ಶಂಕರಬಂಡೆ ವೆಂಕಟೇಶ್ ಸೇರಿದಂತೆ ಸಮಾಜದ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

About The Author