ಕನ್ನಡದ ಜಯಪ್ರಿಯ ಯೂಟ್ಯೂಬರ್ ಕ್ವಾಜಾ aಬಂದೇನ್ವಾಜಾ ಮಹಮದ್ ಹನೀಫ್ ಶಿರಹಟ್ಟಿ ಅಲಿಯಾಸ್ ಮುಕಳೆಪ್ಪ ಯೂಟ್ಯೂಬರ್ ವಿರುದ್ಧ ಬಜರಂಗದಳ ಕಾರ್ಯಕರ್ತರು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಲವ್ ಜಿಹಾದ್ ಆರೋಪ ಮಾಡಿರುವ ಕಾರ್ಯಕರ್ತರು, ಮುಕಳೆಪ್ಪ ಸುಳ್ಳು ದಾಖಲೆ ನೀಡಿ ಹಿಂದೂ ಯುವತಿಯನ್ನ ಮದುವೆಯಾಗಿದ್ದಾನೆ ಎಂದು ಆರೋಪಿಸಿದ್ದಾರೆ.
ಮುಕಳೆಪ್ಪ ಮೂಲತಃ ಇಸ್ಲಾಂ (Islam) ಧರ್ಮಕ್ಕೆ ಸೇರಿದವನಾಗಿದ್ದು, ನಕಲಿ ದಾಖಲೆ ಕೊಟ್ಟು ಹಿಂದೂ ಯುವತಿಯನ್ನ ವಿವಾಹವಾಗಿದ್ದಾನೆ. ಈ ಬಗ್ಗೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ರಿಜಿಸ್ಟರ್ ಮಾಡಿಕೊಳ್ಳುವ ಮೂಲಕ ಮುಕಳೆಪ್ಪ ವಿವಾಹವಾಗಿದ್ದಾನೆ ಎಂದು ದೂರಿನಲ್ಲಿ ಬಜರಂಗದಳ ಕಾರ್ಯಕರ್ತರು ಆರೋಪಿಸಿದ್ದಾರೆ.
ಮುಕಳೆಪ್ಪ ಹಿಂದೂ ಯುವತಿಯರನ್ನೇ ಟಾರ್ಗೆಟ್ ಮಾಡಿ ಅವರ ಜೊತೆ ವೀಡಿಯೋ ಮಾಡುತ್ತಾನೆ. ಶಾರ್ಟ್ ವೀಡಿಯೋದಲ್ಲಿ ಹಿಂದೂ ಯುವತಿಯರು ಹಾಗೂ ಧರ್ಮಕ್ಕೆ ಅವಮಾನ ಮಾಡುವ ರೀತಿಯಲ್ಲಿ ವೀಡಿಯೋ ಮಾಡುತ್ತಾನೆ. ಕಳೆದ ಜೂನ್ 5 ರಂದು ಖೊಟ್ಟಿ ದಾಖಲೆ ಕೊಟ್ಟು ಹಿಂದೂ ಯುವತಿಯನ್ನ ಈತ ವಿವಾಹವಾಗಿದ್ದು, ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಧಾರವಾಡ ಗ್ರಾಮೀಣ ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಧಾರವಾಡ ಎಸ್ಪಿ ಗುಂಜನ್ ಆರ್ಯ, ಮೇಲ್ನೋಟಕ್ಕೆ ಯಾವುದೇ ನಕಲಿ ದಾಖಲೆ ಕೊಟ್ಟು ಮದುವೆಯಾದ ಬಗ್ಗೆ ತಿಳಿದು ಬಂದಿಲ್ಲ.
ಮದುವೆಯಾದ ಯುವತಿಯನ್ನ ವಿಚಾರಣೆ ಮಾಡುತಿದ್ದು, ಪೊಲೀಸ್ ಅಧಿಕಾರಿ ಒಬ್ಬರನ್ನ ನೇಮಿಸಿದ್ದೇವೆ ಎಂದಿದ್ದಾರೆ.
ಸದ್ಯಕ್ಕಂತೂ ಮುಕಳೆಪ್ಪನ ವಿರುದ್ಧ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಬಜರಂಗದಳ ಕಾರ್ಯಕರ್ತರು ದೂರು ಕೊಟ್ಟಿದ್ದು, ಇನ್ನೂ ಎಫ್ಐಆರ್ ದಾಖಲಾಗಿಲ್ಲ.
ಪೊಲೀಸರು ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಹಿಂದೂ ಯುವತಿಯರನ್ನೇ ವೀಡಿಯೋದಲ್ಲಿ ಹಾಕಿಕೊಂಡು ಹಿಂದೂ ಧರ್ಮದ ಹಾಗೂ ಹಿಂದೂ ಆಚರಣೆಗಳನ್ನೇ ಟಾರ್ಗೆಟ್ ಮಾಡಿ ಮುಕಳೆಪ್ಪ ವೀಡಿಯೋಗಳನ್ನು ಮಾಡುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಜರಂಗದಳ ಕಾರ್ಯಕರ್ತರು ಆಗ್ರಹಿಸಿದ್ದಾರೆ.



