WhatsApp Group
Join Now
ರಾಮದುರ್ಗ: ಕನ್ನಡ ಭಾಷೆ ಮತ್ತು ಸಂಸ್ಕೃತಿ ವಿಶ್ವದಲ್ಲಿ ಅತ್ಯಂತ ಶ್ರೀಮಂತವಾಗಿದ್ದು, ವಿದ್ಯಾರ್ಥಿಗಳು ಕನ್ನಡ ನಾಡು-ನುಡಿಯ ಪ್ರಜ್ಞಾವಂತಿಕೆಯನ್ನು ಬೆಳೆಸಿಕೊಳ್ಳಬೇಕೆಂದು ಸಾಹಿತಿ- ಕನ್ನಡ ಉಪನ್ಯಾಸಕ ಡಾ. ರಾಜು ಕಂಬಾರ ಹೇಳಿದರು.
ಪಟ್ಟಣದ ಶ್ರೀಮತಿ ಈರಮ್ಮ ಶಿ. ಯಾದವಾಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ವಿಭಾಗದ ಆಶ್ರಯದಲ್ಲಿ ಮಂಗಳವಾರ ಕರ್ನಾಟಕ ರಾಜ್ಯೋತ್ಸವದ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧಾತ್ಮಕ ಸರಣಿ ನಿಮಿತ್ತ ಜರುಗಿದ ನಾಡು- ನುಡಿ ಹಬ್ಬ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಭಾರತದಲ್ಲಿ ಸಂಸ್ಕೃತ ನಂತರ ಅತ್ಯಂತ ಪ್ರಾಚೀನ ಹಾಗೂ ಉತ್ಕೃಷ್ಟವಾಗದದ್ದು ಕನ್ನಡ ಭಾಷೆಯಾಗಿದೆ. ಕನ್ನಡಿಗರು ಸ್ವಾಭಿಮಾನ, ಶೌರ್ಯ, ಸಾಹಸ, ತ್ಯಾಗ, ಔದಾರ್ಯಕ್ಕೆ ಹೆಸರಾಗಿದ್ದಾರೆ. ಕನ್ನಡವನ್ನು ವಿಶ್ವಮಟ್ಟಕ್ಕೆ ಬೆಳೆಸುವ ಹೊಣೆಗಾರಿಕೆ ಪ್ರತಿಯೊಬ್ಬ ಕನ್ನಡಿಗನದಾಗಿದೆ ಎಂದರು.
ಐಕ್ಯೂಎಸ್ಸಿ ಸಂಯೋಜಕ ಸಂಜಯ ಹಾದಿಮನಿ ಮತ್ತು ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಂ ಆರ್. ದೊಡ್ಡಮನಿ ಮಾತನಾಡಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಎಂ ಡಿ ಕಮತಗಿ ಮಾತನಾಡಿ, ಕನ್ನಡಿಗರಿಗೆ ಕನ್ನಡ ಸಂವೇದನಾಶೀಲ ಮಾತೃಭಾಷೆಯಾಗಿದ್ದು, ಇದರ ಜೊತೆ ಇತರ ಭಾಷೆಯ ಕಲಿಕೆಯು ಅಗತ್ಯವಾಗಿದೆ. ಶ್ರೇಷ್ಠ ಭಾಷೆಗಳಲ್ಲಿ ಒಂದಾಗಿರುವ ಕನ್ನಡದಲ್ಲಿ ವಿಜ್ಞಾನದ ಕ್ಷೇತ್ರದಲ್ಲಿ ಇನ್ನಷ್ಟು ಕಾರ್ಯಗಳು ನಡೆಯಬೇಕಾಗಿದೆ ಎಂದರು.
ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಸ್ವಾಗತ ಗೀತೆ ಹಾಡಿದರು. ಸಾಂಸ್ಕೃತಿಕ ವಿಭಾಗದ ಸಂಯೋಜಕಿ ಡಾ. ಮಂಜುಳಾ ಹಂಚಿನಾಳ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗಾಗಿ ರಸ ಪ್ರಶ್ನೆ ಕಾರ್ಯಕ್ರಮ ನಡೆಸಲಾಯಿತು. ಡಾ. ವೆಂಕಟೇಶ್ ಮಾರುತಿ ಸೂಳಿಕೇರಿ, ವಿನಾಯಕ ಹೊಸಮನಿ, ಸೋಮೇಶ್ ಹೊಸಪೇಟಿ, ಪುಷ್ಪ ಮುಳ್ಳೂರು ಸೇರಿದಂತೆ ಎಲ್ಲ ಪ್ರಾಧ್ಯಾಪಕರು ವಿದ್ಯಾರ್ಥಿಗಳು ಇದ್ದರು.



