ರಾಮದುರ್ಗ ಭಾರತ ದೇಶ ಜಾತ್ಯಾತೀತ ದೇಶ. ಇಲ್ಲಿ ಎಲ್ಲ ಸಮಾಜದವರು ಕೂಡಿ ಬಾಳಿದಂತಹ ದೇಶ. ಈ ದೇಶದಲ್ಲಿ ಇವತ್ತು ಜಾತಿ ಆಧಾರದಲ್ಲಿ ನಮ್ಮನ್ನು ಒಡೆಯುವ ಜಾತಿವಾದಿಗಳು ಕುತಂತ್ರ ಮಾಡುತ್ತಿದ್ದಾರೆ. ಇದನ್ನು ತಡೆಯಲು ನಾವೆಲ್ಲರೂ ಒಂದಾಗಿ ಸಂಘಟನೆಯನ್ನು ಕಟ್ಟಿಕೊಂಡು ಹೋರಾಟಕ್ಕೆ ಸಜ್ಜಾಗಬೇಕೆಂದು ಸಾನಿಧ್ಯ ವಹಿಸಿದ ಶ್ರೀ.ಮ.ನಿ.ಪ್ರ ಶಾಂತವೀರ ಸ್ವಾಮಿಗಳು ಶೀವಮೂರ್ತೇಶ್ವರ ಮಠ ರಾಮದುರ್ಗ ಇವರು ಕಾರ್ಮಿಕ ಕಚೇರಿಯಲ್ಲಿ ನಡೆದ ಇನ್ಸಾಫ್ ಕಮಿಟಿ ನೇತೃತ್ವದಲ್ಲಿ ನಡೆದ ಅಂತರಾಷ್ಟ್ರೀಯ ಅಲ್ಪಸಂಖ್ಯಾತರ ದಿನಾಚರಣೆ ಅಂಗವಾಗಿ ನಡೆದಿರುವ ದುಂಡು ಮೇಜಿನ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಮುಸ್ಲಿಂ ಸಮುದಾಯಕ್ಕೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಹಲವು ನೀರಿಕ್ಷೆಗಳಿವೆ. ಅವರು ಗೌರವಯುತ ಜೀವನ ನಡೆಸಲು ಪ್ರಭುತ್ವ ಕ್ರಮಕೈಗೊಳ್ಳಬೇಕೆಂದು ಬಯಸುತ್ತಾರೆ. ಆದರೆ ಕಳೆದ 10 ವರ್ಷಗಳಿಂದ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಇದರಿಂದ ಮುಸ್ಲಿಂ ಸಮುದಾಯವು ಸಂಪೂರ್ಣವಾಗಿ ಅಸುರಕ್ಷಿತತೆ ಅನುಭವಿಸುತ್ತಿದೆ ಎಂದು ಅಂತರಾಷ್ಟ್ರೀಯ ಅಲ್ಪಸಂಖ್ಯಾತರ ದಿನಾಚರಣೆ ಅಂಗವಾಗಿ ನಡೆದ ದುಂಡು ಮೇಜಿನ ಸಭೆಯನ್ನು ಉದ್ಘಾಟಿಸಿ ಮೌಲಾನಾ ಮುಪ್ತಿ ಜಹೂರ ಹಾಜಿ ರವರು ಮಾತನಾಡಿದರು.
ಭಾರತ ದೇಶದಲ್ಲಿ ಅಲ್ಪಸಂಖ್ಯಾತರ ಸಾಂವಿಧಾನಿಕ ಹಕ್ಕುಗಳ ಮೇಲೆ ಆಳುವ ಸರಕಾರಗಳೇ ದಮನಕ್ಕೆ ನಿಂತಿವೆ. ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಹರಡಿಸುವ ಕೆಲಸ ನಡೆಸುತ್ತಿದ್ದಾರೆ. ಸ್ವತಃ ಪ್ರಧಾನ ಮಂತ್ರಿಗಳೇ ಸುಳ್ಳುಗಳನ್ನು ಆಡುವ ಮೂಲಕ ದ್ವೇಷ ಭಾವನೆ ಹೆಚ್ಚಿಸುತ್ತಿದ್ದಾರೆ. ಮೊನ್ನೆ ಬಿಹಾರ ರಾಜ್ಯದ ಮುಖ್ಯಮಂತ್ರಿ ನಿತಿಶ್ ಕುಮಾರ ಮುಸ್ಲಿಂ ಯುವತಿಯ ಹಿಜಾಬ್ ಎಳೆದಿರುವ ಘಟನೆ ನಡೆದಿದೆ. ಇದನ್ನು ಕೇಂದ್ರದ ಮಂತ್ರಿ ಗಿರಿರಾಜಸಿಂಗ್ ರವರು ಸಮರ್ಥನೆ ಮಾಡಿಕೊಂಡಿದ್ದು ನಿಜವಾಗಿ ಮಾನವ ಕುಲಕ್ಕೆ ಅಪಮಾನ. ಇವತ್ತು ಒಂದು ಪಕ್ಷ ಜಾತಿ ಆಧಾರದ ಮೇಲೆ ಅಲ್ಪಸಂಖ್ಯಾತರನ್ನು ಗುರಿ ಮಾಡುತ್ತಿದೆ. ಇನ್ನೊಂದು ಪಕ್ಷ ಓಟ್ ಬ್ಯಾಂಕ್ ಮಾಡಿಕೊಂಡು ದಮನ ನಡೆಸಿವೆ. ಇಂತಹ ಸಂದರ್ಭದಲ್ಲಿ ಅಲ್ಪಸಂಖ್ಯಾತರು (ಮುಸ್ಲಿಂ, ಕ್ರಿಸ್ಟಿಯನ್, ಭೌದ್ಧ, ಜೈನ್) ಒಂದಾಗಿ ಇನ್ಸಾಫ್ ಸಂಘಟನೆಯನ್ನು ಕಟ್ಟಿಕೊಂಡು ಹೋರಾಟಕ್ಕೆ ಸಿದ್ಧರಾಗೋಣ ಎಂದು ಕಾರ್ಮಿಕ ಮುಖಂಡ ಜಿ.ಎಮ್.ಜೈನೆಖಾನ್ ಮಾತನಾಡಿದರು.
ಭಾರತದ ಸಂವಿಧಾನವು ಎಲ್ಲಾ ನಾಗರಿಕರು ಕಾನೂನಿನ ಮುಂದೆ ಸಮಾನರು ಎಂದು ಘೋಷಿಸಿ, ಅಲ್ಪಸಂಖ್ಯಾತರಿಗೆ ತಮ್ಮ ಆಯ್ಕೆಯ ಧರ್ಮವನ್ನು ಪಾಲಿಸುವದು ಮತ್ತು ತಮ್ಮ ವಿಶಿಷ್ಟ ಸಂಸ್ಕೃತಿಯನ್ನು ರಕ್ಷಿಸಿಕೊಳ್ಳುವುದು ಎಂಬುವದನ್ನು ಮೂಲಭೂತ ಹಕ್ಕುಗಳಾಗಿ ನೀಡಿದೆ. ಆದರೆ ಭಾರತದಲ್ಲಿ ಇತ್ತಿಚಿನ ಅವಧಿಯಲ್ಲಿ ಆಡಳಿತವು ಸಂವಿಧಾನದ ಮೂಲಭೂತ ಘೋಷಣೆಗೆ ವಿರುದ್ದವಾಗಿ ನಡೆಯುತ್ತಿರುವುದು ಎಂದು ನಿವೃತ್ತ ಪ್ರಾಚಾರ್ಯರಾದ ಶ್ರೀ.ಎಸ್.ಜಿ.ಚಿಕ್ಕನರಗುಂದರವರು ಆಕ್ರೋಶ ವ್ಯಕ್ತಪಡಿಸಿದರು. ವಿಪರ್ಯಾಸ
ಭಾರತ ಅಭಿವೃದ್ಧಿಶೀಲ ರಾಷ್ಟ್ರವಾಗಬೇಕಾದರೆ, ಸರಕಾರದ ನೀತಿಗಳು ಎಲ್ಲರನ್ನು ಒಳಗೊಳ್ಳುವಂತೆ ಇರಬೇಕು, ಹೊರತುಪಡಿಸುವಂತೆ ಅಲ್ಲ. ಮುಸ್ಲಿಂರು ದೇಶವನ್ನು ಬ್ರಿಟಿಷರ ಗುಲಾಮಗಿರಿಯಿಂದ ಮುಕ್ತಗೊಳಿಸಲು ಅಪಾರ ತ್ಯಾಗಗಳನ್ನು ಮಾಡಿದ್ದಾರೆ. ಆದ್ದರಿಂದ ಅವರಿಗೆ ಸಮಾನವಾಗಿ ನಡೆದುಕೊಳ್ಳಬೇಕೆಂದು ಭೇದ ಭಾವ ತೋರಬಾರದೆಂದು ಸಭೆಯಲ್ಲಿದ್ದ ಬಿ.ಆರ್.ದೊಡಮನಿ, ಮಹ್ಮದಶಫಿ ಬೆಣ್ಣಿ, ರಾಜಶೇಖರ ಶೆಲೂಡಿ ಮತ್ತು ಶಶಿಕಾಂತ ನೆಲ್ಲೂರ ರವರು ಮಾತನಾಡಿದರು. ನಾಗಪ್ಪ ಸಂಗೊಳ್ಳಿ ಸ್ವಾಗತಿಸಿ ವಂದಿಸಿದರು. ಸಭೆಯಲ್ಲಿ ಅಂಜುಮನ್ ಇಸ್ಲಾಂ ಕಮಿಟಿಯ ಶಬ್ಬಿರಅಹ್ಮದ ಖಾಜಿ, ಬಸೀರ ರೋಣ,ಎಂ ಕೆ ಯಾದವಾಡ, ಸುಭಾಸ ಘೋಡಕೆ, ಸ್ವಾಜಾ ದಾರವಾಡ, ಎ.ಆರ್.ಪಠಾಣ, ಶಕೀಲಾ ಮುಜಾವರ, ಶಬಾನಾ ಶೇಖ್, ಸರಸ್ವತಿ ಮಾಳಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.



