
ಬಳ್ಳಾರಿ ಹರ್ ಘರ್ ತಿರಂಗಾ ಅಭಿಯಾನದಂ ಅಂಗವಾಗಿ ಮಂಗಳವಾರ ಜಿಲ್ಲಾಡಳಿತ ವತಿಯಿಂದ ನಗರದ ಐತಿಹಾಸಿಕ ಬೆಟ್ಟದ ಮೇಲೆ ಹಮ್ಮಿಕೊಂಡಿದ್ದ ರಾಷ್ಟ್ರಧ್ವಜಾರೋಹಣ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಮಹಮ್ಮದ್.ಎನ್ ಝುಬೇರ್ ಭಾಗವಹಿಸಿ ಅವರು ಮಾತನಾಡಿದರು.
ಭಾರತ ದೇಶದ ಸ್ವಾತಂತ್ರ್ಯಕ್ಕಾಗಿ ಎಷ್ಟೋ ಮಹಾನುಭಾವರು ಮತ್ತು ಮಹನಿಯರು ತಮ್ಮ ಪ್ರಾಣವನ್ನು ಮುಡಿಪಾಗಿಟ್ಟಿದ್ದಾರೆ. ಮಹಾನುಭಾವರ ತ್ಯಾಗ ಬಲಿದಾನಗಳ ಪ್ರತೀಕವೇ ಸ್ವಾತಂತ್ರ್ಯವಾಗಿದ್ದು ವಿದ್ಯಾರ್ಥಿಗಳು ಸ್ವಾತಂತ್ರ ಹೋರಾಟಗಾರರ ಮೌಲ್ಯ ಬೆಳೆಸಿಕೊಂಡು, ದೇಶ ಪ್ರೇಮ ಮೈಗೂಡಿಸಿಕೊಳ್ಳಬೇಕು ಎಂದರು.
ವಿಶ್ವದಲ್ಲಿಯೇ ಭಾರತವು ಅತೀ ಹೆಚ್ಚು ಯುವಕರನ್ನು ಒಳಗೊಂಡಂತಹ ದೇಶವಾಗಿದೆ. ಯುವಕರು ತಮ್ಮ ಯೌವ್ವನವನ್ನು ದೇಶ ಪ್ರೇಮಕ್ಕಾಗಿ ಬಳಸಿಕೊಳ್ಳಬೇಕು ಮತ್ತು ದೇಶ ಪ್ರೇಮ ಬೆಳಸಿಕೊಳ್ಳಬೇಕು. ಭವ್ಯ ರಾಜ್ಯ-ಸುಭದ್ರ ರಾಷ್ಟ್ರ ಕಟ್ಟುವಲ್ಲಿ ಯುವಪೀಳಿಗೆಯ ಪ್ರಮುಖ ಪಾತ್ರವಾಗಿದೆ ಎಂದು ತಿಳಿಸಿದರು.
ಪ್ರತಿಯೊಬ್ಬ ವಿದ್ಯಾರ್ಥಿಗಳು ಉತ್ಸುಕತೆಯಿಂದ ಬೆಟ್ಟ ಹತ್ತಿ ರಾಷ್ಟçಧ್ವಜ ಹಾರಿಸಿದ್ದೀರಿ, ಹಾಗೆಯೇ ಅಂತರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳಲ್ಲಿ ಮತ್ತು ಒಲಂಪಿಕ್ಸ್ ಕ್ರೀಡೆಗಳಲ್ಲಿಯೂ ಸಹ ರಾಷ್ಟ್ರಧ್ವಜ ಹಾರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಹುರಿದುಂಬಿಸಿದರು.
ಬಳ್ಳಾರಿಯ ಐತಿಹಾಸಿಕ ಏಕಶಿಲಾ ಬೆಟ್ಟದಲ್ಲಿ ರಾಷ್ಟçದ್ವಜ ಹಾರಿಸುವುದು ದೇಶಪ್ರಮ ಹೆಚ್ಚಿಸುವುದರೊಂದಿಗೆ ದೇಶದ ಹಿರಿಮೆಯಲ್ಲಿ ಪಾತ್ರರಾಗಬಹುದು ಎಂದು ದೇಶಾಭಿಮಾನ ಬಿಂಬಿಸಿದರು.
78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಹಲವು ಕಾರ್ಯಕ್ರಮಗಳನ್ನು ಸ್ಪೂರ್ತಿಯಾಗಿ ತೆಗೆದುಕೊಂಡು, ವಿದ್ಯಾರ್ಥಿಗಳು ಉತ್ತಮವಾಗಿ ಅಭ್ಯಾಸ ಮಾಡಿ ಸಮಾಜದ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದು ಕಿವಿಮಾತು ಹೇಳಿದರು.
ಐತಿಹಾಸಿಕ ಬೆಟ್ಟ ಹತ್ತುವ ಮುನ್ನ ದೇಶಭಕ್ತಿ ಘೋಷಣೆಗಳನ್ನು ಹೇಳಲಾಯಿತು.
ಬೆಟ್ಟದ ಮೇಲೆ ರಾಷ್ಟ್ರಧ್ವಜ ಹಾರಿಸಿ, ರಾಷ್ಟ್ರಗೀತೆ ಹಾಡಲಾಯಿತು.
ಬೆಟ್ಟ ಹತ್ತುವ ಕಾರ್ಯಕ್ರಮದಲ್ಲಿ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎ.ಕೆ.ಜಲಾಲಪ್ಪ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ವಿವಿಧ ವಸತಿ ನಿಲಯ ಪಾಲಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.


