
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಖಾನಪೇಠ ಶ್ರೀ ಧನಲಕ್ಷ್ಮಿ ಸಕ್ಕರೆ ಕಾರ್ಖಾನೆಯ ಲೀಜ್ ಪಡೆದ ಇಐಡಿ ಪ್ಯಾರಿ ಕಂಪನಿಯ 2024-25ನೇ ಸಾಲಿನ ಕಬ್ಬು ನುರಿಸುವ ಹಂಗಾಮಿನ ಬಾಯ್ಲರ ಪ್ರಧೀಪನ ಚಾಲನಾ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಹಾಗೂ ಕಾರ್ಖಾನೆಯ ನಿರ್ದೇಶಕ ಮಹಾದೇವಪ್ಪ ಯಾದವಾಡ ಪಾಲ್ಗೊಂಡು ಅವರು ಮಾತನಾಡಿದರು. ಕಬ್ಬು ನುರಿಸುವ ಹಂಗಾಮಿನಲ್ಲಿ ರೈತರಿಗೆ ಯಾವುದೇ ತೊಂದರೆ ಆಗದಂತೆ ಪ್ಯಾರಿ ಕಂಪನಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಮುಂದಾಗಬೇಕು. ಅಲ್ಲದೇ ಎಲ್ಲಾ ತಳಿಯ ಕಬ್ಬುಗಳನ್ನು ನಿಗದಿತ ಅವಧಿಯಂತೆ ಕಟಾವಿಗೆ ಕ್ರಮ ತೆಗೆದುಕೊಂಡು ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮು ನಡೆಸಬೇಕು. ರೈತರ ಕಷ್ಟಕಾಲದ ಸಂದರ್ಭದಲ್ಲಿ ಅವರಿಂದ ಶೇರು ಹಣ ಸಂಗ್ರಹ ಮಾಡಿ, ಕಾರ್ಖಾನೆ ಪ್ರಾರಂಭಕ್ಕೆ ದಿ. ಬಿ.ಬಿ. ಹಿರೇರಡ್ಡಿಯವರು, ನಾನು ಶ್ರಮಿಸಿದ್ಧೇನೆ. ಅದರ ಅಭಿವೃದ್ಧಿಗೆ ಕಾರ್ಖಾನೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಶ್ರಮಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾರ್ಖಾನೆಯ ಆಡಳಿತ ಮಂಡಳಿಯ ಅಧ್ಯಕ್ಷ ಮಲ್ಲಣ್ಣ ಯಾದವಾಡ, ದೇಶದಲ್ಲಿಯೇ ಸಹಕಾರಿ ರಂಗದ ಸಾಲಮುಕ್ತ ಕಾರ್ಖಾನೆ ಎಂದರೆ ಅದು ಧನಲಕ್ಷ್ಮಿ ಸಹಕಾರಿ ಸಕ್ಕರೆ ಕಾರ್ಖಾನೆ, ಶೇರುದಾರರ ಋಣ ತೀರಿಸಲು ಪ್ರತಿವರ್ಷ ರಿಯಾಯತಿ ದರದಲ್ಲಿ ಒಂದು ಕ್ವಿಂಟಲ್ ಸಕ್ಕರೆ ವಿತರಣೆ ಮಾಡಲಾಗುತ್ತದೆ ಎಂದರು.
ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕಿ ಶಾಹೀನ್ ಅಖ್ತರ ಮಾತನಾಡಿ, ಕಾರ್ಖಾನೆಯ ಅಧಿಕಾರಿಗಳು ಆಡಳಿತ ಮಂಡಳಿಯೊಂದಿಗೆ ಸಭೆ ನಡೆಸಿ, ರೈತರ ಬೇಡಿಕೆಗೆ ಸ್ಪಂದಿಸಿ, ಕಳೆದ ಬಾರಿಗಿಂತ ಹೆಚ್ಚು ಕಬ್ಬು ನುರಿಸಿ, ರೈತರಿಂದಯಾವುದೇ ದೂರುಗಳು ಬರದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಇಐಡಿ ಪ್ಯಾರಿ ಶುರ್ಸ್ ಜಿಎಂ ಶಿವಸುಬ್ರಮಣಿಯನ್ ಮಾತನಾಡಿ, ಕಳೆದ ವರ್ಷ ಸುಮಾರು 6.10ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸಲಾಗಿತ್ತು. ಪ್ರಸಕ್ತ ಸಾಲಿನಲ್ಲಿ ಜಿಲ್ಲಾಧಿಕಾರಿಗಳ ನಿರ್ದೇಶನ, ಆಡಳಿತ ಮಂಡಳಿಯ ಸಹಕಾರ ಹಾಗೂ ರೈತರ ಬೇಡಿಕೆಗೆ ಕಂಪನಿಯವರು ಸ್ಪಂದಿಸುತ್ತೇವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಉಪಾಧ್ಯಕ್ಷ ಬಸನಗೌಡ ದ್ಯಾಮನಗೌಡ್ರ, ನಿರ್ದೇಶಕರಾದ ನಿರ್ದೇಶಕರಾದ ಎ.ಸಿ. ಸುರಗ, ಬಿ.ಎಂ.ತುಪ್ಪದ, ಐ.ಎಸ್. ಹರನಟ್ಟಿ, ಬಾಳಪ್ಪ ಹಂಜಿ, ಎಂ.ಎಂ. ಆತಾರ, ಶಂಕರಗೌಡ ಪಾಟೀಲ, ಟಿ.ಬಿ. ಪಾಟೀಲ, ಸುರೇಶ ಡುಳ್ಳೋಳ್ಳಿ, ಚಂದ್ರು ರಜಪೂತ, ಬಿ.ವಿ. ಪಾಟೀಲ, ಎನ್.ಎಸ್. ಚಾಕಲಬ್ಬಿ, ದುಂಡಪ್ಪ ದೇವರಡ್ಡಿ, ಶಶಿಕಲಾ ಸೋಮಗೊಂಡ, ಶ್ರೀನಿವಾಸ್ ಕರದಿನ, ಮಾಜಿ ಜಿ.ಪಂ ಸದಸ್ಯ ಮಾರುತಿ ತುಪ್ಪದ, ಪ್ಯಾರಿ ಶುರ್ಸ್ನ ಕೇನ್ ಹೆಡ್ ರಮೇಶ ಗಂಗರಡ್ಡಿ, ಜೋನ್ ಹೆಡ್ ಕೆ.ಎಚ್. ಬೂದಿ, ಬಸವರಾಜ ಪಾರಶೆಟ್ಟಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು


