ನವೆಂಬರ 12 ರಂದು ಲೋಕಾಪೂರದಿಂದ ಧಾರವಾಡದವರೆಗೆ ರೈಲ್ವೆ ಮಾರ್ಗಕ್ಕಾಗಿ ಒತ್ತಾಯಿಸಿ ಬೃಹತ್ ಪ್ರತಿಭಟನೆ

WhatsApp Group Join Now

ಉತ್ತರ ಕರ್ನಾಟಕ ಅಭಿವೃದ್ಧಿಗೆ ಪೂರಕವಾದ ರೈಲ್ವೆ ಯೋಜನೆಗಳನ್ನು ಜಾರಿಗೆ ತರಬೇಕೆಂದು ಹಲವಾರು ಹೋರಾಟಗಳು ನಡೆದಿವೆ. ಅದರ ಭಾಗವಾಗಿ ರಾಮದುರ್ಗದಲ್ಲಿ 2005 ರಿಂದ ರಾಮದುರ್ಗದಿಂದ ಶಿರಸಂಗಿ ಕಾಳಮ್ಮದೇವಿ, ಸವದತ್ತಿ ಯಲ್ಲಮ್ಮ ಹಾಗೂ ಅಲ್ಲಿಂದ ಧಾರವಾಡದವರೆಗೆ ರೈಲ್ವೆ ಮಾರ್ಗ ಆಗಬೇಕೆಂದು ನಿರಂತರ ಹೋರಾಟಗಳು ನಡೆದಿವೆ.

ರಾಮದುರ್ಗದಲ್ಲಿ ಹೋರಾಟ ನಡೆಯುತ್ತಿರುವ ಮೊದಲೇ ಬಾಗಲಕೋಟೆಯಲ್ಲಿ ರೈಲ್ವೆ ಮಾರ್ಗದ ಬೇಡಿಕೆ ಇಟ್ಟುಕೊಂಡು ಬಾಗಲಕೋಟದಿಂದ ಕುಡಚಿಯ ವರೆಗೆ ರೈಲ್ವೆ ಮಾರ್ಗ ಆಗಬೇಕೆಂದು ಸತತ ಹೋರಾಟದಿಂದ ಕೊನೆಗೂ ಕೇಂದ್ರ ರಾಜ್ಯ ಸರಕಾರಗಳು ಬಾಗಲಕೋಟದಿಂದ ಕುಡುಚಿಯವರೆಗೆ ರೈಲ್ವೆ ಮಾರ್ಗಕ್ಕೆ ಮಂಜೂರು ನೀಡಿತು. ಈಗ ಲೋಕಾಪೂರದ ವರೆಗೆ ರೈಲ್ವೆ ಬಂದಿದೆ. ಲೋಕಾಪೂರದಿಂದ ಕುಡಚಿಯವರೆಗೆ ಕೆಲಸ ಪ್ರಾರಂಭಿಸಲಾಗಿದೆ. ಅಂದರೆ ಬಾಗಲಕೋಟೆಯ ಜನರ ನಿರಂತರ ಹೋರಾಟ, ಸತತ ಪ್ರಯತ್ನ ಪಟ್ಟ 30 ವರ್ಷ ಹೋರಾಟ ನಡೆಸಿ ಕೊನೆಗೂ ಯಶಸ್ವಿಯಾಗಿದ್ದಾರೆ.

ಕಳೆದ 20 ವರ್ಷಗಳಿಂದ ರಾಮದುರ್ಗದ ಜನತೆಯೂ ರೈಲ್ವೆ ಮಾರ್ಗಕ್ಕೆ ಹೋರಾಟ ನಡೆಸುತ್ತಾ ಬಂದಿದ್ದಾರೆ. ಹೋರಾಟದ ಫಲವಾಗಿ 2016-17 ರಲ್ಲಿ ರೈಲ್ವೆ ಇಲಾಖೆ ಲೋಕಾಪೂರದಿಂದ ಧಾರವಾಡದವರೆಗೆ ಸರ್ವೆ ನಡೆಸಿ 2019 ರಲ್ಲಿ ಅಂದಾಜು ಪತ್ರಿಕೆಯನ್ನೂ ಹೊರಾಡಿಸಿ ಕೊನೆಗೆ ಅದನ್ನು ಕೆಲಸ ಮಾಡದೆ ತಿರಸ್ಕರಿಸಿದ್ದಾರೆ. ಇದನ್ನು ನಾವೆಲ್ಲರೂ ಖಂಡಿಸಲೇಬೇಕು.

ಈಗ ಲೋಕಾಪೂರದ ವರೆಗೆ ರೈಲ್ವೆ ಮಾರ್ಗ ಬಂದು ಬಿಟ್ಟಿದೆ! ಲೋಕಾಪೂರದಿಂದ ರಾಮದುರ್ಗ, ಶಿರಸಂಗಿ, ಸವದತ್ತಿ ಮಾರ್ಗವಾಗಿ ಧಾರವಾಡದ ವರೆಗೆ ರೈಲ್ವೆ ಮಾರ್ಗ ಕೂಡಿಸಬೇಕೆಂದು ನಾವೆಲ್ಲರೂ ಪಕ್ಷಾತೀತವಾಗಿ, ಜ್ಯಾತ್ಯಾತೀತವಾಗಿ ಹೋರಾಟ ನಡೆಸಿ ರಾಮದುರ್ಗದ ಅಭಿವೃದ್ಧಿಗೆ, ರೈತರ-ಕಾರ್ಮಿಕ, ವಿದ್ಯಾರ್ಥಿಗಳ ಮತ್ತು ಎಲ್ಲ ಜನರ ಅನುಕೂಲಕ್ಕಾಗಿ ಹೋರಾಟ ಯಶಸ್ವಿ ಮಾಡಬೇಕಾಗಿದೆ.

ಕಾರಣ ದಿನಾಂಕ 12-11-2024 ರಂದು ಬೆಳಿಗ್ಗೆ 10:30 ಗಂಟೆಗೆ ಶ್ರೀ ವೆಂಕಟೇಶ್ವರ ದೇವಸ್ಥಾನದಿಂದ ರೈಲ್ವೆ ಮಾರ್ಗಕ್ಕಾಗಿ ಬೃಹತ್ ಮೆರವಣಿಗೆ ಹೊರಡಿಸಿ, ತೇರ ಬಜಾರ ಮೂಲಕ ಹಳೆ ಪೋಲೀಸ್ ಸ್ಟೇಷನ್‌ದಿಂದ ನೇರವಾಗಿ ತಹಶೀಲ್ದಾರ ಕಚೇರಿಗೆ ತೆರಳಿ ಸಂಬಂಧಪಟ್ಟ ಇಲಾಖೆಗೆ ತಹಶೀಲ್ದಾರ ಮೂಲಕ ಮನವಿ ಅರ್ಪಿಸ- ಬೇಕಾಗಿದೆ. ಆದ್ದರಿಂದ ರಾಮದುರ್ಗ ತಾಲೂಕಿನ ಕಾರ್ಮಿಕರು, ರೈತರು, ವಿದ್ಯಾರ್ಥಿಗಳು, ಜನಪರ ಸಂಘಟನೆಗಳ ಎಲ್ಲ ಮುಖಂಡರು ಮತ್ತು ಚುನಾಯಿತ ಪ್ರತಿನಿಧಿಗಳು ಈ ಜನಪ್ರಿಯ ಹೋರಾಟದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ರಾಮದುರ್ಗ ತಾಲೂಕಾ ರೈಲ್ವೆ ಹೋರಾಟ ಕ್ರಿಯಾ ಸಮಿತಿ
ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

About The Author