ರಾಯಚೂರು ಸಂಸದ ಜಿ.ಕುಮಾರ ನಾಯಕ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ನವದೆಹಲಿಯಲ್ಲಿ ಗುರುವಾರ ಭೇಟಿ ಮಾಡಿ ಆಲಮಟ್ಟಿ -ಯಾದಗಿರಿ ರೈಲು ಮಾರ್ಗ ಯೋಜನೆಗೆ ಅನುಮೋದನೆ ನೀಡುವಂತೆ ಒತ್ತಾಯಿಸಿದರು. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ, ತೆಲಂಗಾಣ ಹಾಗೂ ಒಡಿಶಾದಲ್ಲಿ ರೈಲ್ವೆ ಸಂಪರ್ಕ ಜಾಲ ಕಡಿಮೆ ಇದೆ.
ಈ ಲೋಪವನ್ನು ಸರಿಪಡಿಸಲು ರಾಜ್ಯದ ರೈಲು ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ನೀಡಬೇಕು. ಆಲಮಟ್ಟಿ -ಯಾದಗಿರಿ ರೈಲು ಮಾರ್ಗದ ಬೇಡಿಕೆಯು ದಶಕಗಳಷ್ಟು ಹಳೆಯದು ಎಂದು ಸಚಿವರ ಗಮನಕ್ಕೆ ತಂದರು. ಉದ್ದೇಶಿತ ರೈಲು ಮಾರ್ಗವು ವಿಜಯಪುರ ಮತ್ತು ಯಾದಗಿರಿ ನಡುವಣ ಪ್ರಯಾಣದ ಅಂತರ ಗಣನೀಯವಾಗಿ ಕಡಿಮೆ ಮಾಡುತ್ತದೆ.
ಪ್ರಸ್ತುತ ಪ್ರಯಾಣವನ್ನು 328 ಕಿ.ಮೀಯಿಂದ 165 ಕಿ.ಮೀಗೆ ಕಡಿತಗೊಳಿಸುತ್ತದೆ. ಈ ಪ್ರದೇಶದಲ್ಲಿ
ಬೆಳೆಯುವ ಆರು ಲಕ್ಷ ಟನ್ಗಳಷ್ಟು ಭತ್ತ ಸೇರಿದಂತೆ ಕೃಷಿ ಉತ್ಪನ್ನಗಳ ಸಾಗಣೆಗೆ ಈ ರೈಲು ಮಾರ್ಗದಿಂದ ಅನುಕೂಲವಾಗುತ್ತದೆ. ಈ ಪ್ರದೇಶದ ಸಾಮಾಜಿಕ ಆರ್ಥಿಕ ಅಭಿವೃದ್ಧಿಗೆ ಪೂರಕ ಆಗಿರಲಿದೆ ಎಂದು ಅವರು ತಿಳಿಸಿದರು. ಮುಂಬರುವ ಬಜೆಟ್ನಲ್ಲಿ ಈ ಯೋಜನೆಯನ್ನು ಸೇರಿಸಿ ಶೀಘ್ರ ಅನುಷ್ಠಾನ ಮಾಡಬೇಕು ಎಂದು ಅವರು ಕೋರಿದರು. ಈ ಪ್ರಸ್ತಾವನೆಗೆ ಸೂಕ್ತ ಆದ್ಯತೆ ನೀಡಿ ಪರಿಗಣಿಸುವುದಾಗಿ ಸಚಿವರು ಭರವಸೆ ನೀಡಿದರು.



