ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಹೊರವಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ರಾಮೇಶ್ವರ ದೇವಸ್ಥಾನದಲ್ಲಿ 8 ನೇ ವರ್ಷದ ಧಾರ್ಮಿಕ, ಸಂಸ್ಕೃತಿಕ ಹಾಗೂ ಶಿವರಾತ್ರಿ ಜಾಗರಣೆ ಕಾರ್ಯಕ್ರಮ ಫೆ.26 ರಂದು ಜರುಗಲಿದೆ ಎಂದು ವಿಧಾನಸಭೆ ಮುಖ್ಯ ಸಚೇತಕ ಹಾಗೂ ಶಿವ ಪ್ರತಿಷ್ಠಾಪನಾ ಸೇವಾ ಸಮಿತಿ ಅಧ್ಯಕ್ಷ ಅಶೋಕ ಪಟ್ಟಣ ಹೇಳಿದರು.
ರಾಮೇಶ್ವರ ದೇವಸ್ಥಾನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಹಾಗೂ ಶಿವನಮೂರ್ತಿ ಮತ್ತು ಬೃಹತ್ ನಂದಿ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಮಧ್ಯಾಹ್ನ 4 ಘಂಟೆಯಿಂದ 6 ಘಂಟೆ ವರೆಗೆ ವಿವಿಧ ಭಜನಾ ಮಂಡಳಿಗಳಿಂದ ಭಜನೆ, ಪಂಡಿತ ಪುಟ್ಟರಾಜ ಸಂಗೀತ ಪಾಠಶಾಲೆ, ಸಹಜಸ್ಥಿತಿ ಯೋಗ ಸತ್ಸಂಗ ಬಳಗದ ವತಿಯಿಂದ ಶಿವ ನಾಮಸ್ಮರಣೆ ಕಾರ್ಯಕ್ರಮಗಳು ಜರುಗಲಿವೆ.
ಸಂಜೆ 7 ಘಂಟೆಯಿಂದ 8 ಘಂಟೆ ವರೆಗೆ ಮಹಾಶಿವರಾತ್ರಿ ಕಾರ್ಯಕ್ರಮದ ಉದ್ಘಾಟನೆ ಕಾರ್ಯಕ್ರಮ ವಿಧಾನಸಭೆ ಮುಖ್ಯ ಸಚೇತಕ ಹಾಗೂ ಶಿವ ಪ್ರತಿಷ್ಠಾಪನಾ ಸೇವಾ ಸಮಿತಿಯ ಅಧ್ಯಕ್ಷ ಅಶೋಕ ಪಟ್ಟಣ ಅವರ ನೇತೃತ್ವದಲ್ಲಿ ನಡೆಯಲಿದೆ. ರಾಮದುರ್ಗದ ವಿದ್ವಾನ್ ಸರ್ವೇಶ್ವರ ಮನವಾಚಾರ್ಯ ಪದ್ಮಭಾಸ್ಕರ ನೃತ್ಯ ಕಲಾ ಕೇಂದ್ರ ಮತ್ತು ಪಂಚಕಟ್ಟಿಮಠ ಆಂಗ್ಲ ಮಾಧ್ಯಮ ಶಾಲೆ, ಹಾಗೂ ವಿಪಿಎಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮಗಳು ನಡೆಯಲಿವೆ. ಇದೇ ಸಂದರ್ಭದಲ್ಲಿ ಸಂಗೀತ, ಸಾಹಿತ್ಯ, ಶಿಕ್ಷಣ ಸೇರಿದಂತೆ ಸುಮಾರು ಐದು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹನೀಯರನ್ನು ಗುರುತಿಸಿ ಸತ್ಕರಿಸಲಾಗುತ್ತಿದೆ.
ರಾತ್ರಿ 8.30 ಘಂಟೆಯಿಂದ 9.30 ಘಂಟೆ ವರೆಗೆ ಕೀರ್ತನ ಕೇಸರಿ, ಸವದತ್ತಿ ತಾಲೂಕು ಕರಿಕಟ್ಟಿ ಗ್ರಾಮದ ಕಲಾಕುಶಲ ಸಾಮ್ರಾಟ ಹಾಗೂ ಆಕಾಶವಾಣಿ ದೂರದರ್ಶನ ಕಲಾವಿದ ಶ್ರೀ ಗುರುನಾಥ ಶಾಸ್ತ್ರಿಗಳಿಂದ ಶಿವ ನಾಮಸ್ಮರಣೆ ನಡೆಯಲಿದೆ. ರಾತ್ರಿ 9.30 ಘಂಟೆಯಿಂದ 10.30 ಘಂಟೆವರೆಗೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಮಣಕವಾಡ ಗ್ರಾಮದ ಶ್ರೀ ಅನ್ನದಾನೀಶ್ವರ ಮಠದ ಶ್ರೀ ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳಿಂದ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಶಿವರಾತ್ರಿ ದಿನದಂದು ಲಕ್ಷಕ್ಕೂ ಹೆಚ್ಚು ಭಕ್ತರು ಆಗಮನದ ಹಿನ್ನೆಲೆಯಲ್ಲಿ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಲು ಪೊಲೀಸ್ ಇಲಾಖೆಯ ಅಧಿಕಾರಿಗಳು ಸನ್ನದ್ಧರಾಗಿದ್ಧಾರೆ. ಕಾರ್ಯಕ್ರಮಕ್ಕೆ ಆಗಮಿಸುವ ಸುಮಾರು 1 ಲಕ್ಷ ಭಕ್ತಾಧಿಗಳಿಗೆ ಬಂದ ಭಕ್ತರಿಗೆ ಅಲ್ಪೋಪಹಾರ ವ್ಯವಸ್ಥೆ ಕಲ್ಪಿಸಲಾಗಿದೆ.
15ಕ್ವಿಂಟಾಲ್ ಸಾಬೂದಾನಿ, 15ಕ್ವಿಂಟಾಲ್ ಶೇಂಗಾ ಮತ್ತು 1 ಲಕ್ಷ ಬಾಳೆಹಣ್ಣು ಹಾಗೂ ಶಾಸಕ ಜಮೀರ ಅಹ್ಮದಖಾನ್ ಅವರು ಮುಂಬೈಯಿಂದ 3 ಟನ್ ಕರ್ಜೂರ ಪೂರೈಸಲಿದ್ದಾರೆ. ಭಕ್ತರು ಕ್ಷೇತ್ರದಲ್ಲಿ ಶಾಂತಿ ಸುವ್ಯವಸ್ಥೆ ಕಾಯ್ದುಕೊಳ್ಳುವಂತೆ ಅಶೋಕ ಪಟ್ಟಣ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಶಿವ ಪ್ರತಿಷ್ಠಾಪನಾ ಸೇವಾ ಸಮಿತಿ ಸದಸ್ಯರಾದ ಸುರೇಶ ಪತ್ತೇಪೂರ, ಪ್ರದೀಪ ಪಟ್ಟಣ, ವಿಜಯ ಶೆಟ್ಟಿ, ಜಯಪ್ರಕಾಶ ಶಿಂಧೆ, ನಂದಕುಮಾರ ಸುರೇಬಾನ, ಫಕೀರಪ್ಪ ಕೊಂಗವಾಡ ಪಾಲ್ಗೊಂಡಿದ್ದರು.



