ವಿಶ್ವ ತಾಯಂದಿರ ದಿನದ ಪ್ರಯುಕ್ತ ಎರಡು ಕೃತಿಗಳ ಲೋಕಾರ್ಪಣೆ

WhatsApp Group Join Now

ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ವಿಶ್ವ ತಾಯಂದಿರ ದಿನದ ಅಂಗವಾಗಿ ಡಾ. ಸುನೀಲ ಪರೀಟ ಅವರ ‘ನಮ್ಮ ತಾಯಿ ದೇವರು’ ಹಾಗೂ ‘ವ್ಯಕ್ತಿ ಶಕ್ತಿ’ ಎಂಬ ಎರಡು ಕೃತಿಗಳ ಲೋಕಾರ್ಪಣೆಯಾದ ಸಂದರ್ಭದಲ್ಲಿ ರಾಜ್ಯಮಟ್ಟದ ಮಾತೃ ಸಾಹಿತ್ಯ ಸೇವಾರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ನಮ್ಮ ತಾಯಿ ದೇವರು ಪುಸ್ತಕವನ್ನು ಬಿಡುಗಡೆ ಮಾಡಿದ ಕನ್ನಡ ಸಾಹಿತ್ಯ ಭವನದ ಕಾರ್ಯದರ್ಶಿಗಳಾದ ಬಿ.ಎಂ. ಕಟ್ಟಿಯವರು ತಾಯಿಗೆ ಸಮರ್ಪಿತವಾದ ಇಂಥ ಕೃತಿಗಳು ಯಾವುದೇ ಕಾಲದಲ್ಲಿ ಉತ್ತಮ ಪ್ರಭಾವವನ್ನು ಬೀರುತ್ತವೆ ಎಂದು ಹೇಳಿದರು. ಪುಸ್ತಕ ಪರಿಚಯವನ್ನು ಮಾಡಿದ ಸರಕಾರಿ ಪ್ರಥಮ ದರ್ಜೆ ಕಾಲೇಜು ಯರಗಟ್ಟಿಯ ಕನ್ನಡ ಪ್ರಾಧ್ಯಾಪಕರಾದ ಡಾ. ರಾಜಶೇಖರ ಬಿರಾದಾರ ಅವರು ಬಹುತೇಕ ಎಲ್ಲಾ ಮನುಕುಲಕ್ಕೆ ತಾಯಿ ಎಂದರೆ ದೇವರು ಎಂಬುದು ಕಲ್ಪನೆ ಮಾತ್ರವಲ್ಲ ಅದು ನಮ್ಮ ನೈಜ ಸತ್ಯ. ತಾಯಿಯನ್ನು ಕೊಂಡಾಡಿದ ಹಿರಿಮೆ ಈ ಒಂದು ಕೃತಿಯಲ್ಲಿ ಗೋಚರವಾಗುತ್ತಿದೆ ಇಂತಹ ಕೃತಿಗಳು ಮಾತೃ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿವೆ ಎಂದು ಹೇಳಿದರು. ಡಾ. ಸುನೀಲ ಪರೀಟ ಅವರ ಸ್ವರಚಿತ ಕವನ ಸಂಕಲನ ‘ವ್ಯಕ್ತಿ ಶಕ್ತಿ’ ಕೃತಿಯನ್ನು ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಅಡಿವೇಶ ಇಟಗಿ ಅವರು ಇದೊಂದು ವಿಶಿಷ್ಟವಾದ ಕೃತಿಯಾಗಿದೆ, ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಅನೇಕ ಮಹನೀಯರು ತಮ್ಮ ಪ್ರಭಾವವನ್ನು ಬೀರುತ್ತಾರೆ ಅಂಥವರ ಕುರಿತು ಕೃತಜ್ಞತಾ ಮನೋಭಾವನೆಯನ್ನು ವ್ಯಕ್ತಪಡಿಸುವ ಕೃತಿ ಸಾಹಿತ್ಯ ಲೋಕದಲ್ಲಿ ವಿನೂತನವಾಗಿದೆ ಎಂದು ಹೇಳಿದರು. ಕೃತಿ ಪರಿಚಯವನ್ನು ಮಾಡುತ್ತಾ ಖಾನಾಪೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಪ್ರಾಧ್ಯಾಪಕರಾದ ಡಾ. ಚಂದ್ರಶೇಖರ ತಾಬೋಜಿಯವರು ವ್ಯಕ್ತಿ ಶಕ್ತಿ ಎಂಬ ಕೃತಿ ಡಾ. ಸುನೀಲ ಪರೀಟ ಅವರ ಜೀವನದಲ್ಲಿ ಪ್ರಭಾವ ಬೀರಿರುವ ವ್ಯಕ್ತಿಗಳ ಕುರಿತು ಕೃತಜ್ಞತೆಯನ್ನು ವ್ಯಕ್ತಪಡಿಸಿದ ಒಂದು ವಿಭಿನ್ನ ಕೃತಿ ಈ ಸಾಹಿತ್ಯ ಲೋಕಕ್ಕೆ ಪರಿಚಯಿಸಿದ್ದಾರೆ. ಇಂತಹ ಕೃತಿಗಳು ಸಾಹಿತ್ಯ ಲೋಕವನ್ನು ಇನ್ನಷ್ಟು ವೈಭವೀಕರಿಸುತ್ತದೆ ಎಂಬುದಕ್ಕೆ ಸಂದೇಹವಿಲ್ಲ.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ ಬೆಳಗಾವಿಯ ಹಿರಿಯ ಸಾಹಿತಿಗಳು ಶ್ರೀಮತಿ ಜಯಶೀಲಾ ಬ್ಯಾಕೋಡ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಇಂತಹ ಎರಡು ಕೃತಿಗಳು ನಮ್ಮ ಸಾಹಿತ್ಯ ಲೋಕವನ್ನು ವಿಜ್ರಂಭಿಸುವಂತೆ ಮಾಡಿವೆ. ಏಕೆಂದರೆ ತಾಯಿಯ ಕುರಿತು ಹಲವಾರು ಕೃತಿಗಳು ಈಗಾಗಲೇ ಬಂದಿವೆ ಆದರೆ ಇಂತಹ ತಂತ್ರಜ್ಞಾನದ ಯುಗದಲ್ಲಿ ತಾಯಿಯ ಕುರಿತು ತಾಯಿಯ ಮಮತ, ಪ್ರೀತಿ, ವಾತ್ಸಲ್ಯದ ಕುರಿತು ಕೃತಿಯೊಂದು ಹೊರಹೊಮ್ಮಿದೆ ಎಂದರೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಹಾಗೆಯೇ ಒಬ್ಬ ವ್ಯಕ್ತಿಯ ಜೀವನದಲ್ಲಿ ಪ್ರಭಾವ ಬೀರಿರುವ ವ್ಯಕ್ತಿಗಳ ಕುರಿತು ಒಂದು ಕೃತಿ ಹಲವಾರು ಸಾಹಿತಿಗಳಿಗೆ ಪ್ರೇರಣೆ ನೀಡುತ್ತದೆ ಮಾರ್ಗದರ್ಶನ ಮಾಡುತ್ತದೆ ಎಂದು ಹೇಳಿದರು.

ಸಂಪಾದಕರು ಹಾಗೂ ಲೇಖಕರಾದ ಡಾ. ಸುನೀಲ ಪರೀಟ ಅವರು ತಮ್ಮ ಭಾಷಣದಲ್ಲಿ ಕೃತಿಗಳ ಕುರಿತು ತಮ್ಮ ಒಡಲಾಳದ ಅನುಭವವನ್ನು ಹಂಚಿಕೊಂಡರು. ಇವತ್ತಿನ ಸಮಕಾಲೀನ ಪರಿಸ್ಥಿತಿಯಲ್ಲಿ ಪುಸ್ತಕಗಳನ್ನು ಪ್ರಕಟಿಸುವುದು ಅತ್ಯಂತ ಕಠಿಣವಾದ ಕೆಲಸವಾಗಿದೆ ಆದರೆ ಗುರು ಹಿರಿಯರ ಹಾಗೂ ಸಾಹಿತಿಗಳ ಮಾರ್ಗದರ್ಶನದಿಂದ ಹಾಗೂ ಸಹಕಾರದಿಂದ ಎಲ್ಲವೂ ಸಾಧ್ಯವಾಗುತ್ತದೆ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಸುಮಾ ದೊಡಮನಿ, ಎಂ ಎಸ್ ಹಿರೇಮಠ, ಡಾ. ಹೇಮಾ ಸೊನ್ನೊಳ್ಳಿ, ಡಾ. ಶಿವು ನಂದಗಾಂವ, ಎಂ ವೈ ಮೆಣಸಿನಕಾಯಿ, ಈರಣ್ಣ ಆಲೂರ, ಸುಮತಿ ಶಂಕರಗೌಡ ಮುಂತಾದವರು ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಉಪಸ್ಥಿತರಿದ್ದರು. ನಾಡಿನ ಸಾಹಿತ್ಯಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಯನ್ನುಗೈದ ಸಾಧಕರಿಗೆ ರಾಜ್ಯಮಟ್ಟದ ಮಾತೃ ಸಾಹಿತ್ಯ ಸೇವಾರತ್ನ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ಈ ಸಂದರ್ಭದಲ್ಲಿ ನಾಡಿನ ಮೂಲೆ ಮೂಲೆಯಿಂದ ನೂರಾರು ಸಾಹಿತಿಗಳು, ಕವಿ ಮನಸುಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿನಿ ಅನುರಾಧಾ ಕೋಲ್ಕಾರ ನಾಡಗೀತೆಯನ್ನು ಪ್ರಸ್ತುತಪಡಿಸಿದಳು, ಡಾ. ಸುನೀಲ ಪರೀಟ ಅವರು ಎಲ್ಲರನ್ನೂ ಸ್ವಾಗತಿಸಿದರು, ಶ್ರೀಮತಿ ಗಂಗಮ್ಮಾ ಪಾಟೀಲ ಅವರು ನಿರೂಪಣೆ ಮಾಡಿದರು, ಎಂ ವೈ ಮೆಣಸಿನಕಾಯಿ ಅವರು ವಂದಿಸಿದರು.

About The Author