ಬೆಂಗಳೂರು: ರಾಜಧಾನಿಯ ಶಿವಾಜಿನಗರದಲ್ಲಿ ಗಂಭೀರ ಘಟನೆಯೊಂದು ನಡೆದಿದ್ದು, ಕಾಲುದಾರಿ (ಫುಟ್ಪಾತ್) ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅಧಿಕಾರಿಗಳ ಮೇಲೆ ಕಿಡಿಗೇಡಿಗಳು ಭೀಕರವಾಗಿ ಹಲ್ಲೆ ನಡೆಸಿದ್ದಾರೆ.
ಬೆಂಗಳೂರಿನ ಪಾದಚಾರಿಗಳ ಸುರಕ್ಷತೆಗಾಗಿ ಜಿಬಿಎ ಕೈಗೊಂಡಿರುವ ‘ಸುರಕ್ಷಿತ ಫುಟ್ಪಾತ್’ ಅಭಿಯಾನದ ಭಾಗವಾಗಿ ಶಿವಾಜಿನಗರ ಪ್ರದೇಶದಲ್ಲಿ ಒತ್ತುವರಿ ತೆರವುಗೊಳಿಸುವ ಕಾರ್ಯಚರಣೆ ನಡೆಯುತ್ತಿತ್ತು. ಈ ಸಮಯದಲ್ಲಿ ಸ್ಥಳೀಯ ರಸ್ತೆಬದಿ ವ್ಯಾಪಾರಿಗಳು ಹಾಗೂ ಕೆಲ ಕಿಡಿಗೇಡಿಗಳು ಕಾರ್ಯಾಚರಣೆಗೆ ಅಡ್ಡಿಪಡಿಸಿ, ಕರ್ತವ್ಯನಿರತ ಅಧಿಕಾರಿಗಳ ಮೇಲೆ ಏಕಾಏಕಿ ವಾಗ್ದಾಳಿ ನಡೆಸಿದ್ದಾರೆ.
ದುಷ್ಕರ್ಮಿಗಳು ಅಧಿಕಾರಿಗಳ ಕಣ್ಣಿಗೆ ಪೆಪ್ಪರ್ ಸ್ಪ್ರೇ ಹಾಗೂ ಕೈಗೆ ಸಿಕ್ಕ ವಸ್ತುಗಳಿಂದ ಹಲ್ಲೆ ನಡೆಸಿದ್ದು, ಘಟನೆಯಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಕೊಲೆ ಯತ್ನ ಪ್ರಕರಣ ದಾಖಲು, ಐವರು ವಶಕ್ಕೆ…
ಘಟನೆ ನಡೆದ ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಹಲ್ಲೆಯಲ್ಲಿ ನೇರವಾಗಿ ಭಾಗಿಯಾಗಿದ್ದ ಐವರು ಶಂಕಿತರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಕರ್ತವ್ಯದಲ್ಲಿದ್ದ ಅಧಿಕಾರಿಗಳ ಜೀವಕ್ಕೆ ಅಪಾಯ ತಂದೊಡ್ಡಿದ್ದಕ್ಕಾಗಿ ಸೆಕ್ಷನ್ 307 (ಕೊಲೆ ಯತ್ನ) ಹಾಗೂ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದಡಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ.
ಗಲಾಟೆಯ ನೇತೃತ್ವ ವಹಿಸಿ, ಹಲ್ಲೆಗೆ ಪ್ರಚೋದನೆ ನೀಡಿದ್ದ ಮುಖ್ಯ ಆರೋಪಿಯನ್ನು ಗುರುತಿಸಲಾಗಿದ್ದು, ಶೀಘ್ರದಲ್ಲೇ ಬಂಧಿಸುವುದಾಗಿ ಪೊಲೀಸ್ ಕಮಿಷನರೇಟ್ ತಿಳಿಸಿದೆ.
ನಗರದಲ್ಲಿ ಪಾದಚಾರಿಗಳ ಹಕ್ಕು ಮತ್ತು ಸುರಕ್ಷತೆಗಾಗಿ ನಡೆಸಲಾಗುತ್ತಿರುವ ‘Safe Footpath’ ಅಭಿಯಾನವನ್ನು ಯಾವುದೇ ಒತ್ತಡಕ್ಕೂ ಮಣಿಯದೆ ಮುಂದುವರಿಸಲಾಗುವುದು. ಸರ್ಕಾರಿ ನೌಕರರ ಮೇಲೆ ಕೈಮಾಡಿದವರ ವಿರುದ್ಧ ಅತ್ಯಂತ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು.” ಎಂದು ಆಡಳಿತ ವರ್ಗ ಸ್ಪಷ್ಟಪಡಿಸಿದೆ.



